SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ | ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ: ಎಸ್.ಎಸ್.ಎಲ್. ಸಿ ಪಾಸ್ ಆದ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ, ಮುಂದಿನ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಿಂದ ಪ್ರೋತ್ಸಾಹ ಧನ ನೀಡಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ.

ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶ ಮೇ.19 ರಂದು ಪ್ರಕಟಗೊಂಡಿದ್ದು, ಈ ಪರೀಕ್ಷೆಯಲ್ಲಿ 600 ಅಂಕಕ್ಕಿಂತ ಹೆಚ್ಚು ಅಂಕ ಪಡೆದ ಕಾರ್ಮಿಕರ ಮಕ್ಕಳಿಗೆ ಈ ಸೌಲಭ್ಯ ನೀಡಲಾಗುತ್ತದೆ.

ಈ ಪ್ರೋತ್ಸಾಹ ಧನ ಪಡೆಯಲು ನೋಂದಾಯಿತ ಕಾರ್ಮಿಕ ಮಕ್ಕಳ ಹೆಸರು, ಫಲಾನುಭವಿಗಳ ಹೆಸರು, ನೋಂದಾಣಿ ಸಂಖ್ಯೆ, ದೂರವಾಣಿ ಸಂಖ್ಯೆ, ಪಡೆದ ಅಂಕಗಳು, ವ್ಯಾಸಂಗ ಮಾಡಿದ ಶಾಲೆಯ ಹೆಸರು ಮತ್ತು ವಿಳಾಸ, ವಾಸವಿರುವ ಜಿಲ್ಲೆಯ ಹೆಸರುಗಳನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ನೀಡಬೇಕಾಗಿದೆ.

ಅರ್ಜಿಯನ್ನು ಮೇ.26 ರೊಳಗಾಗಿ ಹತ್ತಿರದ ಕಾರ್ಮಿಕ ನಿರೀಕ್ಷಕರ ಕಚೇರಿ/ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ನೀಡಬೇಕೆಂದು ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ಮಾಡುವ ಕಾರ್ಮಿಕರ ಮಕ್ಕಳು ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಂಡಿರುತ್ತು, ಇದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಅಗತ್ಯ ಪ್ರೋತ್ಸಾಹ ನೀಡಲು ಅನುಕೂಲವಾಗುವಂತೆ ಪ್ರಸ್ತುತ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 600 ಅಂಕಗಳಿಗಿಂತ ಹೆಚ್ಚು ಅಂಕ ಪಡೆದಿರುವ ಮಕ್ಕಳಿಗೆ ಈ ಸೌಲಭ್ಯ ರೂಪಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

Leave A Reply

Your email address will not be published.