ನಡುರಸ್ತೆಯಲ್ಲಿ ದುಷ್ಕರ್ಮಿಗಳ ಪುಂಡಾಟ !!| 15 ಸುತ್ತು ಗುಂಡಿನ ದಾಳಿ, ಇಬ್ಬರಿಗೆ ಗಂಭೀರ ಗಾಯ

ನಡುರಸ್ತೆಯಲ್ಲಿ ದುಷ್ಕರ್ಮಿಗಳು 15 ಸುತ್ತು ನಡೆಸಿದ ಗುಂಡಿನ ದಾಳಿಯಿಂದಾಗಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ದೆಹಲಿಯ ಸುಭಾಷ್ ನಗರದಲ್ಲಿ ನಡೆದಿದೆ.

ಕೇಶೋಪುರ್ ಸಬ್ಜಿ ಮಂಡಿ ಯೂನಿಯನ್‍ನ ಮಾಜಿ ಅಧ್ಯಕ್ಷ ಅಜಯ್ ಚೌಧರಿ ಮತ್ತು ಅವರ ಸಹೋದರ ಜಸ್ವಂತ್ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಸದ್ಯ ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಪಶ್ಚಿಮ ಜಿಲ್ಲೆಯ ಡಿಸಿಪಿ ಘನಶ್ಯಾಮ್ ಬನ್ಸಾಲ್ ತಿಳಿಸಿದ್ದಾರೆ.

ಈ ಘಟನೆಯು ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದ್ದು, ಕಾರಿನೊಳಗೆ ಕುಳಿತಿದ್ದವರ ಮೇಲೆ ಇಬ್ಬರು ಕಿಡಿಗೇಡಿಗಳು ಗುಂಡಿನ ದಾಳಿಯನ್ನು ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಲು ಆರಂಭಿಸಿದಾಗ ಕಾರನ್ನು ತಕ್ಷಣ ಮುಂದಕ್ಕೆ ಚಲಾಯಿಸಲಾಗಿದೆ. ಆದರೂ ದುಷ್ಕರ್ಮಿಗಳು ಬೆನ್ನಟ್ಟಿದ ಹಿನ್ನೆಲೆ ಮತ್ತೆ ಕಾರನ್ನು ಹಿಂದಕ್ಕೆ ಚಲಾಯಿಸಿ, ಕಾರನ್ನು ಎಡಕ್ಕೆ ಟರ್ನ್ ಮಾಡಿಕೊಂಡು ವೇಗವಾಗಿ ಹೋಗುವುದನ್ನು ನೋಡಬಹುದಾಗಿದೆ. ಅದರಲ್ಲೂ ಘಟನೆ ವೇಳೆ ದುಷ್ಕರ್ಮಿಗಳು ಸುಮಾರು 10 ರಿಂದ 15 ಬಾರಿ ಗುಂಡು ಹಾರಿಸಿದ್ದಾರೆ.

ಗುಂಡಿನ ದಾಳಿಗೆ ಕಾರಣವೆನೆಂಬುವುದರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಆದರೆ ಜೈಲಿನಲ್ಲಿರುವ ಸಲ್ಮಾನ್ ತ್ಯಾಗಿ ಆ್ಯಂಡ್ ಗ್ಯಾಂಗ್ ಅಜಯ್ ಚೌಧರಿ ಮೇಲಿನ ವೈಯಕ್ತಿಕ ದ್ವೇಷದ ಹಿನ್ನೆಲೆ ಗುಂಡಿನ ದಾಳಿ ನಡೆಸಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಸದ್ಯ ಪೊಲೀಸರು ಈ ಘಟನೆ ಸಂಬಂಧ ತನಿಖೆ ಆರಂಭಿಸಿದ್ದಾರೆ.

Leave A Reply

Your email address will not be published.