ಉಪ್ಪಿನಂಗಡಿ:ಚಾಲಕನ ಅಜಾಗರೂಕತೆಯಿಂದ ಮಹಿಳೆಯ ಸೊಂಟಕ್ಕೆ ಗಾಯ!! ಆಸ್ಪತ್ರೆಗೆ ದಾಖಲಾಗಿ ಠಾಣೆಗೆ ದೂರು ನೀಡಿದ ಮಹಿಳೆಯ ದೂರಿನಲ್ಲೇನಿದೆ!??

ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೋರ್ವರು ಕೆಳಕ್ಕೆ ಬಿದ್ದು ಗಾಯಗೊಂಡ ಘಟನೆಯೊಂದು ಬೆಳಕಿಗೆ ಬಂದಿದ್ದು, ಸದ್ಯ ಮಹಿಳೆ ನೀಡಿದ ದೂರನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಹಿಳೆಯನ್ನು ಸಕಲೇಶಪುರ ತಾಲೂಕಿನ ಅನಿತಾ(38) ಎಂದು ಗುರುತಿಸಲಾಗಿದೆ.

ಘಟನೆ ವಿವರ:ಅನಿತಾ ಅವರು ತನ್ನ ಮಗಳನ್ನು ಮಂಗಳೂರಿನಲ್ಲಿರುವ ಶಾಲೆಯೊಂದಕ್ಕೆ ಸೇರಿಸುವ ನಿಟ್ಟಿನಲ್ಲಿ ಕುಟುಂಬದ ಕೆಲ ಸದಸ್ಯರೊಂದಿಗೆ ಸಕಲೇಶಪುರದಿಂದ ಬಸ್ಸಿನಲ್ಲಿ ಮಂಗಳೂರಿನತ್ತ ಹೊರಟಿದ್ದು,ಬಸ್ಸಿನ ಮುಂದಿನ ಸೀಟು ಭರ್ತಿಯಾಗಿದ್ದರಿಂದ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು.

ಬಸ್ಸು ನೆಲ್ಯಾಡಿ ಸಮೀಪ ತಲುಪುತ್ತಿದ್ದಂತೆ ಚಾಲಕ ಹಠಾತ್ ಬ್ರೇಕ್ ಹಾಕಿದ್ದು, ಈ ವೇಳೆ ಮಹಿಳೆ ಸೀಟಿನಿಂದ ಕೆಳಕ್ಕೆ ಬಿದ್ದು ಗಾಯಗೊಂಡರು.ಈ ಹಿನ್ನೆಲೆಯಲ್ಲಿ ಬಸ್ಸಿನಿಂದಿಳಿದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಬಳಿಕ ಊರಿಗೆ ಮರಳಿದ್ದರು. ಆದರೆ ಸೊಂಟ ನೋವು ಮತ್ತೆ ಉಲ್ಭಣಿಸಿದ್ದು, ಕೂಡಲೇ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದರು.

ಮಹಿಳೆಯನ್ನು ಪರಿಶೀಲಿಸಿದ ವೈದ್ಯರು ಗಂಭೀರ ಸ್ವರೂಪದ ಗಾಯಗಳಾದ ಹಿನ್ನೆಲೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದು, ಸದ್ಯ ಮಹಿಳೆಯು ಘಟನೆಗೆ ಕಾರಣನಾದ ವಾಹನ ಸಂಖ್ಯೆ KA 18 F 1051ರ ಚಾಲಕನ ವಿರುದ್ಧ ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.