ಉದನೆ: ಮತ್ತೊಮ್ಮೆ ಮತ್ಸ್ಯಧಾಮಕ್ಕೆ ಬಿತ್ತು ಕಟುಕರ ಕಣ್ಣು!! ತೋಟೆ ಇಟ್ಟು ಹಲವು ಮೀನುಗಳ ಮಾರಣಹೋಮ-ಹೊರರಾಜ್ಯದ ಮೂವರು ಪೊಲೀಸರ ವಶಕ್ಕೆ

ಉದನೆ: ಇಲ್ಲಿನ ಗೋಪಾಲಕೃಷ್ಣ ದೇವಸ್ಥಾನದ ಪಕ್ಕದಲ್ಲಿರುವ ಪುರಾತನ ಕೆರೆ,ಮತ್ಸ್ಯಧಾಮದಲ್ಲಿ ಮೀನಿನ ಶಿಕಾರಿ ನಡೆಸಿದ ಹೊರರಾಜ್ಯದ ಮೂವರನ್ನೂ ಊರವರು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಅಲ್ಲೇ ಸಮೀಪದಲ್ಲಿ ಕಲ್ಲಿನ ಕೋರೆಯೊಂದರಲ್ಲಿ ಕೆಲಸ ಮಾಡುವ ಮೂವರು ನಿನ್ನೆಯ ದಿನ ಸಂಜೆ ಪ್ರಾಚೀನ ಕೆರೆಯಲ್ಲಿ ಮೀನು ಶಿಕಾರಿ ನಡೆಸಲು ಮುಂದಾಗಿದ್ದು, ಸ್ಪೋಟಕ (ತೋಟೆ) ಇಟ್ಟ ಪರಿಣಾಮ ಹಲವಾರು ಮೀನುಗಳ ಮಾರಣಹೋಮವೇ ನಡೆದಿತ್ತು.ವಿಷಯ ಗಮನಕ್ಕೆ ಬರುತ್ತಿದ್ದಂತೆ ಊರಿನವರು ಒಟ್ಟಾಗಿದ್ದು, ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದ್ದಾರೆ ಎನ್ನಲಾಗಿದೆ.

ಪೆರುವೆಲ್ ಜಾತಿಯ ದೇವರ ಮಿಂನೆಂದೇ ಪ್ರಸಿದ್ಧಿ ಪಡೆದ ಮೀನುಗಳ ಮಾರಣಹೋಮ ಕಂಡು ಸ್ಥಳೀಯರು ಕಿಡಿಕಾರಿದ್ದು, ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸದ್ಯ ಕೃತ್ಯ ಎಸಗಿದ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಪ್ರಾಚೀನ ಕೆರೆಯ ಒಡಲಿಗೆ ಸ್ಪೋಟಕ ಇದೇ ಮೊದಲಲ್ಲ!!
ಹೌದು. ಉರುವೆಲ್ತಾಯ ಮತ್ಸ್ಯಧಾಮಕ್ಕೆ ಪ್ರಾಚೀನ ಹಿನ್ನೆಗಳಿವೆ. ಈ ವರೆಗೆ ಪೂರ್ವಜರಲ್ಲಿ ಓರ್ವರು ಮಾತ್ರ ಕೆರೆಯ ಆಳ ನೋಡಿದ್ದು, ಕೆರೆಯ ಆಳ ಎಷ್ಟಿದೆ ಎನ್ನುವ ಮಾಹಿತಿ ಇಲ್ಲವಂತೆ. ಶಿಶಿಲೇಶ್ವರ ದೇವಾಲಯಕ್ಕೂ ಈ ಕೆರೆಗೂ ಸಂಬಂಧವಿದ್ದು, ಅಲ್ಲಿನ ಮೀನುಗಳೇ ಇಲ್ಲಿಯೂ ಇವೆಯೆಂಬ ನಂಬಿಕೆಯಿಂದಲೇ ಊರಿನ ಮಂದಿ ಕೆರೆಯ ಮೀನಿನ ರಕ್ಷಣೆಗೆ ಮುಂದಾಗಿದ್ದಾರೆ.

ಈ ಮೊದಲಿನಿಂದಲೂ ಹಲವರು ಇಲ್ಲಿ ಮೀನು ಹಿಡಿದಿದ್ದು,ಊರವರ ವಿರೋಧದ ನಡುವೆಯೂ ಕದ್ದುಮುಚ್ಚಿ ಕೆಲ ಅನ್ಯಮತೀಯರು ಮೀನು ಹಿಡಿದ ಪರಿಣಾಮ ಸಂಬಂಧಪಟ್ಟ ಇಲಾಖೆಯ ಗಮನಕ್ಕೂ ತರಲಾಗಿತ್ತು.ಸದ್ಯ ಪ್ರಾಚೀನ ಕೆರೆಯ ರಕ್ಷಣೆಗಾಗಿ ಹೊಸದಾಗಿ ಹಿಂದೂ ಧಾರ್ಮಿಕ ಕೇಂದ್ರ ರಕ್ಷಣಾ ಸಮಿತಿ ರಚಿಸಲಾಗಿದ್ದು, ಇಂತಹ ಪ್ರಕರಣಗಳು ಮರುಕಳಿಸಿದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಲಾಗಿದೆ.

Leave A Reply

Your email address will not be published.