ಪುತ್ತೂರು : ಬಸ್ಸಿನಲ್ಲಿ ಅನ್ಯಕೋಮಿನ ಯುವಕನಿಂದ ಯುವತಿಗೆ ಕಿರುಕುಳ ಪ್ರಕರಣ| ದೂರು, ಪ್ರತಿದೂರು ದಾಖಲು!

ಪುತ್ತೂರು: ಎ‌.25 ರಂದು ಬಸ್ಸಿನಲ್ಲಿ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರು ಯುವಕನಿಗೆ ಥಳಿಸಿದ ಪ್ರಕರಣ ಕುರಿತು ಪುತ್ತೂರು ನಗರ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.

ದೂರಿನ ವಿವರ : ಏ.25ರಂದು ಮಹಮ್ಮದ್ ಸತ್ತಾರ್ ಎಂಬ ಯುವಕ ಸುಳ್ಯದಿಂದ ಪುತ್ತೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ಸಿನಲ್ಲಿ ಎಡ ಬದಿ ಇಬ್ಬರು ಪ್ರಯಾಣಿಕರು ಕುಳಿತುಕೊಳ್ಳುವ ಸೀಟಿನಲ್ಲಿ ಒಬ್ಬಳು ಯುವತಿ ಕುಳಿತಿದ್ದು, ಆ ಯುವತಿಯ ಪಕ್ಕದಲ್ಲಿ ಯುವಕ ಕುಳಿತಿದ್ದಾನೆ. ನಂತರ ಬಸ್ಸು ಕನಕಮಜಲು ತಲುಪುತ್ತಿದ್ದಂತೆ, ಆ ಯುವತಿ ಬಸ್‌ನ ಕಂಡಕ್ಟರ್ ಮತ್ತು ಇತರ ಇಬ್ಬರಲ್ಲಿ ಯುವಕ ತೊಂದರೆ ಕೊಟ್ಟಿದ್ದಾನೆಂದು ಆರೋಪ ಮಾಡಿದ್ದಾಳೆ.

ನಂತರ ಯುವಕ ಸೀಟಿನಿಂದ ಎದ್ದು ನಿಂತುಕೊಂಡಿರುತ್ತಾನೆ. ಬಸ್ಸು ಪುತ್ತೂರು ತಲುಪುತ್ತಿದ್ದಂತೆ ನಾಲ್ಕು ಜನ ಅಪರಿಚಿತ ವಿದ್ಯಾರ್ಥಿಗಳು ಯುವಕನ ಬಳಿ ಬಂದು ನೀನು ಹುಡುಗಿಗೆ ಯಾಕೆ ತೊಂದರೆ ಕೊಟ್ಟಿದ್ದಿ ಎಂದು ಕೇಳಿ ಕೈ ಕಾಲಿನಿಂದ ತಲೆಗೆ ಮುಖಕ್ಕೆ ಹೊಡೆದು ದೂಡಿ ಹಾಕಿದ್ದಾರೆಂದು ದೂರು ನೀಡಲಾಗಿದೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿ ದೂರು ಇಂತಿದೆ ; ಏ.25ರಂದು ಯುವತಿಯೊಬ್ಬಳು ಸುಳ್ಯದಿಂದ ಪುತ್ತೂರು ಕಡೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಯುವಕನು ಬಸ್ಸಿಗೆ ಹತ್ತಿ ಯುವತಿ ಕುಳಿತ ಸೀಟಿನ ಬಲಬದಿಯಲ್ಲಿ ಕುಳಿತು ಆಕೆ ಜೊತೆ ಅನುಚಿತವಾಗಿ ವರ್ತಿಸಿ ದೈಹಿಕ ಕಿರುಕುಳ ನೀಡಿದ್ದಾನೆ.

ಈ ಬಗ್ಗೆ ಯುವತಿ ಕಂಡಕ್ಟರ್ ಬಳಿ ದೂರಿಕೊಂಡಾಗ ಆತನನ್ನು ಅಲ್ಲಿಂದ ಎಬ್ಬಿಸಿ ಬೇರೆ ಸೀಟಿನಲ್ಲಿ ಕುಳ್ಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.