ಎಟಿಎಂನಿಂದ ತೆಗೆದ ಹಣ ಕೈಸೇರದೆ ಅಕೌಂಟ್ ನಿಂದ ಕಟ್ ಆಗಿ ವ್ಯಥೆ ಪಟ್ಟಿದ್ದೀರಾ!?| ಇಂತಹ ಪರಿಸ್ಥಿತಿಯಲ್ಲಿ ನೀವು ಮಾಡಬೇಕಾದ ಕೆಲಸದ ಕುರಿತು ಇಲ್ಲಿದೆ ಮಾಹಿತಿ

ಇಂದಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರಗಳಿಲ್ಲದೆ ಜೀವನ ಸಾಗುವುದಿಲ್ಲ. ಹಣಕಾಸಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೂ ಬ್ಯಾಂಕ್ ಅತ್ಯಗತ್ಯ. ಅದಲ್ಲದೆ ಈಗಿನ ಕಾಲದಲ್ಲಿ ಎಟಿಎಂ ಬಳಸದವರು ಯಾರೂ ಇಲ್ಲ. ಆದರೆ ಕೆಲವೊಮ್ಮೆ ಹಣ ತೆಗೆಯುವಾಗ ಎಟಿಎಂನಲ್ಲಿಯೇ ಹಣ ಸಿಕ್ಕಿಹಾಕಿಕೊಳ್ಳುತ್ತದೆ. ಹೀಗಾದಾಗ ಅನೇಕ ಜನರು ಆತಂಕಕ್ಕೊಳಗಾಗುತ್ತಾರೆ. ಮತ್ತೆ ಮತ್ತೆ ಎಟಿಎಂನಿಂದ ಹಣ ತೆಗೆಯಲು ಪ್ರಯತ್ನಿಸುತ್ತಾರೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು ಎಂಬ ಅರಿವು ನಮಗಿರಬೇಕು. ಹಾಗಾದರೆ ಈ ಪರಿಸ್ಥಿತಿ ಎದುರಾದಾಗ ಏನು ಮಾಡಬೇಕೆಂಬ ಮಾಹಿತಿ ನಿಮಗಾಗಿ ಇಲ್ಲಿದೆ ನೋಡಿ.
ಆರ್ಬಿಐ ನಿಯಮಗಳ ಪ್ರಕಾರ, ಖಾತೆದಾರನು ಎಟಿಎಂನಿಂದ ಹಣವನ್ನು ತೆಗೆಯುವಾಗ ಖಾತೆಯಿಂದ ಹಣ ಕಡಿತಗೊಂಡು, ನಗದು ಹೊರಬರದಿದ್ದರೆ ಏನು ಮಾಡಬೇಕು ಎಂದು ತಿಳಿಸಲಾಗಿದೆ. ಹೀಗಾದಾಗ, ಯಾವುದೇ ಹತ್ತಿರದ ಶಾಖೆಯನ್ನು ಸಂಪರ್ಕಿಸಿ. ಒಂದು ವೇಳೆ ಬ್ಯಾಂಕ್ ಮುಚ್ಚಿದ್ದರೆ ಬ್ಯಾಂಕ್ನ ಕಸ್ಟಮರ್ ಕೇರ್ಗೆ ಕರೆ ಮಾಡಿ ಮಾಹಿತಿ ನೀಡಿ. ಅಲ್ಲಿ ನಿಮ್ಮ ದೂರನ್ನು ದಾಖಲಿಸಲಾಗುತ್ತದೆ. ನಂತರ ಗ್ರಾಹಕರ ಹಣವನ್ನು ಮತ್ತೆ ಅವರ ಖಾತೆಗೆ ಹಾಕಲು ಬ್ಯಾಂಕ್ಗೆ ಒಂದು ವಾರಗಳ ಕಾಲಾವಕಾಶ ಸಿಗಲಿದೆ.
ಎಟಿಎಂನಿಂದ ಹಣವನ್ನು ತೆಗೆಯುವಾಗ, ವಹಿವಾಟು ವಿಫಲವಾಗಬಹುದು. ಆದರೆ ನೀವು ಅದರ ಸ್ಲಿಪ್ ಅನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಹಾಗಾಗಿ ಟ್ರಾನ್ಸಾಕ್ಶನ್ ಕ್ಯಾನ್ಸಲ್ ಎಂದು ಬಂದರೂ ಆ ಸ್ಲಿಪ್ ತೆಗೆದುಕೊಳ್ಳುವುದನ್ನು ಮರೆಯಬೇಡಿ. ಕಾರಣಗಳಿಂದ ಸ್ಲಿಪ್ ಕೂಡಾ ಸಿಗದೇ ಹೋದರೆ, ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು ನೀಡಬಹುದು. ಇಲ್ಲಿ ಟ್ರಾನ್ಸಾಕ್ಶನ್ ಸ್ಲಿಪ್ ಯಾಕೆ ಮುಖ್ಯ ಎಂದರೆ, ಅದರಲ್ಲಿ ಎಟಿಎಂ ಐಡಿ, ಸ್ಥಳ, ಸಮಯ ಮತ್ತು ಬ್ಯಾಂಕ್ ರೆಸ್ಪಾನ್ಸ್ ಕೋಡ್ ಅನ್ನು ಮುದ್ರಿಸಲಾಗಿರುತ್ತದೆ.
ಇಂತಹ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಆರ್ಬಿಐ ವಿಶೇಷ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರ ಪ್ರಕಾರ, ಅಂತಹ ಸಂದರ್ಭಗಳಲ್ಲಿ, ಬ್ಯಾಂಕ್ ಗ್ರಾಹಕರಿಗೆ 7 ದಿನಗಳಲ್ಲಿ ಹಣವನ್ನು ಹಿಂದಿರುಗಿಸಬೇಕಾಗುತ್ತದೆ. ಒಂದು ವಾರದೊಳಗೆ ಬ್ಯಾಂಕ್ ನಿಮ್ಮ ಹಣವನ್ನು ಹಿಂತಿರುಗಿಸದಿದ್ದರೆ, ಬ್ಯಾಂಕ್ ಗ್ರಾಹಕರಿಗೆ ದಿನಕ್ಕೆ 100 ರೂ. ಯಂತೆ ಹಣ ನೀಡಬೇಕಾಗುತ್ತದೆ.