ಉಡುಪಿ : ಕಾಡು ಹಂದಿಗೆ ಬೈಕ್ ಡಿಕ್ಕಿ | ಸಹ ಸವಾರನಿಗೆ ಗಂಭೀರ ಗಾಯ‌!

Share the Article

ಉಡುಪಿ: ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡು ಹಂದಿಯೊಂದು ರಸ್ತೆ ಅಡ್ಡ ಬಂದ ಪರಿಣಾಮ ಗಲಿಬಿಲಿಗೊಂಡ ಬೈಕ್ ಸವಾರ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಬೈಕಿನಲ್ಲಿದ್ದ ಸಹಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆಯೊಂದು ನಡೆದಿದೆ.

ಉಡುಪಿ ಜಿಲ್ಲೆಯ ಮುದೂರು ಗ್ರಾಮದ ನಲವತ್ತುಕುನ್ನು ಎಂಬಲ್ಲಿ ಘಟನೆ ನಡೆದಿದೆ.

ಮಾ.18ರಂದು ಪಿ.ಎನ್ ಸದಾಶಿವನ್ ಎಂಬುವವರು ರಾತ್ರಿ 9:30 ಗಂಟೆಗೆ ತಮ್ಮ ಮಗ ಸುಜಿತ್‌ನ ಬೈಕ್‌ನಲ್ಲಿ ಹಿಂಬದಿ ಕುಳಿತುಕೊಂಡು ಮನೆಯ ಸಮೀಪದಲ್ಲಿರುವ ಜಮೀನಿಗೆ ಕೃಷಿ ಕೆಲಸಕ್ಕೆ ಅಳವಡಿಸಿದ ನೀರಿನ ಪೈಪ್‌ನ್ನು ಸರಿ ಮಾಡಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಮುದೂರು ಗ್ರಾಮದ ನಲವತ್ತುಕುನ್ನು ಎಂಬಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದಾಗ, ಅಚಾನಕ್ಕಾಗಿ ಕಾಡು ಹಂದಿ ಅಡ್ಡ ಬಂದಿದ್ದು ಇದನ್ನು ನೋಡಿದ ಸವಾರ ಗಲಿಬಿಲಿಗೊಂಡು ಒಮ್ಮೆಲೆ ಬ್ರೇಕ್ ಹಾಕಿದ್ದಾರೆ. ಪರಿಣಾಮ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಸದಾಶಿವನ್ ರಸ್ತೆಗೆಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದಾರೆ.

ರಸ್ತೆಗೆ ಬಿದ್ದ ಪರಿಣಾಮ ತಲೆಗೆ, ಎದೆಗೆ ತರಚಿದ ಗಾಯ ಮತ್ತು ಎಡ ಭುಜಕ್ಕೆ ಹಾಗೂ ಎಡಕಾಲು ತೊಡೆಗೆ ಗಂಭೀರ ಗಾಯ ಉಂಟಾಗಿದೆ. ಗಾಯಾಳುವನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply