ಪ್ರೀತಿಯಿಂದ ಸಾಕಿದ ಮಗಳನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ !! | ಬಡತನದಿಂದ ಬೆಂದು ಹೋಗಿ ತಮ್ಮ ಜೀವನಕ್ಕೆ ಅಂತ್ಯಹಾಡಿದ ತಂದೆ-ಮಗಳ ಹೃದಯವಿದ್ರಾವಕ ಕಥೆ ಹೀಗಿದೆ

ಕೆಲವರಿಗೆ ಜೀವನ ಹಾಲು-ಜೇನಿನಂತೆ ಇದ್ದರೆ, ಇನ್ನೂ ಕೆಲವರಿಗೆ ಬೇವಿನಂತಿರುತ್ತದೆ. ಮುಂದಿನ ದಿನಗಳಿಗೆ ಬೇಕೆಂದು ಕೂಡಿಡುವವರ ಮಧ್ಯೆ ಇಂದಿಗೆ ಆಗಬೇಕಲ್ಲವೇ ಎಂದು ಒಂದೊತ್ತು ಊಟಕ್ಕೆ ಪರದಾಡುವವರು ಅದೆಷ್ಟೋ ಮಂದಿ. ಈ ಬಡತನ ಮುಗ್ಧ ಹೃದಯಗಳ ಪ್ರಾಣವನ್ನೇ ಹಿಂಡಿದೆ.

ಹೌದು. ಮಗಳೇ ನನಗೆಲ್ಲಾ ಎಂದುಕೊಂಡು ಪ್ರೀತಿಯಿಂದ ಸಾಕಿದ್ದ ಅಪ್ಪನೇ ತನ್ನ ಮಗಳನ್ನು ಕೈಯಾರೇ ಸಾಯಿಸಿದ್ದಾನೆ. ಕಾರಣ ಆಕೆ ತಮ್ಮಂತೆ ಕಷ್ಟ ನೋಡಬಾರದು ಎಂಬ ಬಡತನದ ನೋವಿನಿಂದ.ಕೋಲಾರ ಜಿಲ್ಲೆಯ ಬಂಗಾರಪೇಟೆ ಮೂಲದ ವಿಜಯ್ ಕುಮಾರ್ , ತನ್ನ ಕೈಯಿಂದಲೇ ಮಗಳ ಹತ್ಯೆ ಮಾಡಿ, ತಾನೂ ನೇಣು ಬಿಗಿದುಕೊಂಡು ಸಾವನಪ್ಪಿದ್ದಾನೆ.

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ವೆಲ್ಡ್ಡಿಂಗ್ ಕೆಲಸ ಮಾಡಿಕೊಂಡು ಜೀವನ‌ ಸಾಗಿಸುತ್ತಿದ್ದ ವಿಜಯ್ ಕುಮಾರ್ ಕಳೆದ‌ ಮೂರು ತಿಂಗಳಿನಿಂದ ಕೆಲಸಕ್ಕೆ ಹೋಗಿರಲಿಲ್ಲ. ಕಂಪನಿ ಲಾಸ್ ನಲ್ಲಿ ನಡೆಯುತ್ತಿದೆ ಎಂದು ವಿಜಯ್ ಕುಮಾರ್ ಸೇರಿದಂತೆ ಹತ್ತು ಮಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಅಂದಿನಿಂದ ವಿಜಯ್ ಕುಮಾರ್ ಖಿನ್ನತೆಗೆ ಒಳಗಾಗಿದ್ದರು. ಜೊತೆಗೆ ಸಾಲ ಕಟ್ಟಲು ಅಲ್ಲಿ ಇಲ್ಲಿ ಕೆಲಸಕ್ಕೆ ಅಲೆದಾಡಿ ಸುಸ್ತಾಗಿದ್ದು, ಫುಡ್​ ಡಿಲಿವರಿ ಬಾಯ್​​ ಆಗಿಯೂ ಕೆಲ ಕಾಲ ಕೆಲಸ ಮಾಡಿದ್ದರು.

ಬಿಸಿನೆಸ್‌ ಗಾಗಿ ಕಾರಣ ಹಲವೆಡೆ ಸಾಲ‌ ಮಾಡಿಕೊಂಡಿದ್ದ ವಿಜಯ್ , ಮಗಳ ಭವಿಷ್ಯದ ಬಗ್ಗೆ ಯೋಚಿಸಿ ಚಿಂತೆಯಲ್ಲಿದ್ದರು.ಸ್ವಾಭಿಮಾನಿಯಾಗಿದ್ದ ಮೃತ ವಿಜಯ್ ಕುಮಾರ್ ಖಾಸಗಿ ಶಾಲೆಯೊಂದರಲ್ಲಿ ತನ್ನ ಮಗಳು ಸಮೀಕ್ಷಾಳನ್ನು ಓದಿಸುತ್ತಿದ್ದರು. ಅಲ್ಲದೇ ಮಗಳ ಭವಿಷ್ಯಕ್ಕಾಗಿ ಹಾಗೂ ದಿನನಿತ್ಯದ ಖರ್ಚಿಗಾಗಿ ಯಾರನ್ನೂ ಬೇಡಬಾರದು ಅಂತ‌ ಅಂದುಕೊಂಡಿದ್ದ ವಿಜಯ್ ತನ್ನ ಜೊತೆ ಸಾವಿನ ಮನೆ ಸೇರಲು ತನ್ನ ಮಗಳನ್ನು ‌ಶಾಲೆಗೆ‌ ಕಳುಹಿಸದೇ ತನ್ನ ಬಳಿ ಇರಿಸಿಕೊಂಡಿದ್ದರು.ಆತನ ಹೆಂಡತಿ ಕೆಲಸಕ್ಕೆ ‌ಹೋಗಿದ್ದ ವೇಳೆ, ಮೊಬೈಲ್ ಚಾರ್ಜರ್ ವೈಯರ್​​​ ಬಳಸಿ ಮಗಳ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಅಲ್ಲದೇ ಅದಕ್ಕೂ‌ ಮೊದಲು ಮದ್ಯದ ಬಾಟಲಿಗೆ ವಿಷ ಮತ್ತು ನಿದ್ದೆ ಮಾತ್ರೆ ಸೇವಿಸಿ, ತಾನೂ ಮಂಪರಿಗೆ ಹೋಗಲು ಪ್ರಯತ್ನಿಸಿ ಕೊನೆಗೆ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಹೋದರ ಚಂದ್ರು ತಿಳಿಸಿದ್ದಾನೆ.

ಕೆಲಸದಿಂದ ಬಂದ ಪತ್ನಿ ಅದೆಷ್ಟೋ ಬಾರಿ ಕಾಲ್ ಮಾಡಿದ್ರೂ ಫೋನ್ ಪಿಕ್ ಮಾಡದ ವಿಜಯ್, ಬಾಗಿಲು ಎಷ್ಟೇ ಬಡಿದ್ರೂ ತೆಗೆದಿರಲಿಲ್ಲ, ಬಳಿಕ ಮನೆ ಮಾಲೀಕನ ಬಳಿ ಇನ್ನೊಂದು ಕೀ ಬಳಸಿ ಬಾಗಿಲು ತೆಗೆದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ.

‘ಮೃದು ಸ್ವಭಾವದ ವಿಜಯ್ ಕುಮಾರ್ ಸಭ್ಯಸ್ಥನಾಗಿದ್ದು, ಯಾರಿಗೂ ತೊಂದರೆ ನೀಡಿದವನಲ್ಲ. ನಾನು ಮತ್ತು ವಿಜಯ್ ಕುಮಾರ್ ವೆಲ್ಡಿಂಗ್ ಶಾಪ್ ಆರಂಭಿಸಿದ್ವಿ. ಆದ್ರೆ ವಿಜಯ್ ಕುಮಾರ್ ನಷ್ಟ ಹೊಂದಿದ್ದರು’ ಎಂದು ಸಹದ್ಯೋಗಿಯಾದ ಸುಮನ್ ಅಭಿಪ್ರಾಯಪಟ್ಟಿದ್ದಾರೆ.ಈ ಸಂಬಂಧ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.