ಪುತ್ತೂರು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಬಿ.ಟಿ ರಂಜನ್ ವಿಧಿವಶ!!

ಪುತ್ತೂರು:ತಾಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ, ಹೊಸದಿಗಂತ ಪತ್ರಿಕೆಯ ಹಿರಿಯ ವರದಿಗಾರ, ವರದಿಗಾರಿಕೆಯಲ್ಲಿ ಎಂದೂ ರಾಜಿಮಾಡದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಟಿ ರಂಜನ್ ಎಂದೇ ಖ್ಯಾತರಾಗಿದ್ದ ಉಪ್ಪಿನಂಗಡಿ ರಥಬೀದಿ ನಿವಾಸಿ ಬಂಟ್ವಾಳ ತೋನ್ಸೆ ಶೆಣೈ(60) ಅನಾರೋಗ್ಯದಿಂದ ನಿಧನರಾದರು.

ಕಳೆದ ಮೂರು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ರಂಜನ್ ಆರೋಗ್ಯದಲ್ಲಿ ಏರುಪೇರಾಗಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಇಹಲೋಕವನ್ನು ತ್ಯಜಿಸಿದ್ದಾರೆ.

ಕರಾವಳಿ ಪತ್ರಿಕಾ ಲೋಕದ ಪ್ರಖ್ಯಾತ ಹೆಸರಾದ ವಡ್ಸರ್ಸೆ ರಘುರಾಮ ಶೆಟ್ಟಿಯವರ ಒಡೆತನದ ಮುಂಗಾರು ಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಅನಂತರ ಮಂಗಳೂರು ಮಿತ್ರ, ಹೊಸ ದಿಗಂತ ಪತ್ರಿಕರಯಲ್ಲಿ ಕೆಲಸ ಮಾಡಿದರು. 26 ವರ್ಷಗಳ ಸುದೀರ್ಘ ಕಾಲ ಉದಯವಾಣಿ ಪತ್ರಿಕೆಯಲ್ಲಿ ವಿವಿಧ ಸ್ಥರದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದ ಹೆಗ್ಗಳಿಕೆ ಬಿ ಟಿ ರಂಜನ್ ಅವರದ್ದು. 2017 ರಲ್ಲಿ ಉದಯವಾಣಿಗೆ ರಾಜೀನಾಮೆ ನೀಡಿದ ಬಳಿಕ ಮತ್ತೆ ಹೊಸದಿಗಂತ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿದರು.

ಮೂರು ದಶಕಕ್ಕೂ ಅಧಿಕ ಕಾಲದಿಂದ ಪತ್ರಿಕಾ ರಂಗದಲ್ಲಿ ವ್ಯವಸಾಯ ಮಾಡುತ್ತಿದ್ದ ಪತ್ರಿಕಾ ರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹತ್ತು ಹಲವು ಪುರಸ್ಕಾರ, ಪ್ರಶಸ್ತಿ ಸನ್ಮಾನಗಳು ಸಂದಿವೆ.

ಕಳೆದ ಎರಡು ಮೂರು ದಿನಗಳಿಂದ ಶೀತ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ರಂಜನ್ ಅವರಿಗೆ ನಿನ್ನೆ ( ಫೆ. 4 ) ಬೆಳಿಗ್ಗೆಯಿಂದ ಜ್ವರ ಕಾಣಿಸಿಕೊಂಡು ಆರೋಗ್ಯದಲ್ಲಿ ವಿಪರೀತ ಏರುಪೇರು ಕಾಣಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಮಧ್ಯಾಹ್ನದ ವೇಳೆ ಆರೋಗ್ಯ ಇನ್ನಷ್ಟು ಹೆಚ್ಚಾದ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ.

Leave A Reply

Your email address will not be published.