ಬೆಳ್ತಂಗಡಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ!! ಎರಡೂ ಕಣ್ಣುಗಳನ್ನು ದಾನ ಮಾಡಿ ಮಗನ ಸಾವಿನ ನೋವಲ್ಲೂ ಖುಷಿ ಕಂಡ ಪೋಷಕರು

Share the Article

ಬೆಳ್ತಂಗಡಿ: ಅನಾರೋಗ್ಯದಿಂದ ಮೃತಪಟ್ಟ ಯುವಕನೋರ್ವನ ಕಣ್ಣು ದಾನ ಮಾಡಿ, ಆ ಮೂಲಕ ಅಂಧರ ಬಾಳು ಬೆಳಗುವಂತೆ ಮಾಡಿದ್ದು ಯುವಕನ ಪೋಷಕರು ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಮೃತ ಯುವಕನನ್ನು ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಆದರ್ಶ ನಗರ ನಿವಾಸಿ ಶಶಾಂಕ್(19) ಎಂದು ಗುರುತಿಸಲಾಗಿದೆ.

ಶಶಾಂಕ್ ಮನೆಯ ಆರ್ಥಿಕ ಸಮಸ್ಯೆಯಿಂದಾಗಿ ಕಲಿಕೆಯನ್ನು 10 ನೇ ತರಗತಿಗೆ ಮೊಟಕುಗೊಳಿಸಿ ಮಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಕೆಲ ಸಮಯದಿಂದ ಇದ್ದಕ್ಕಿಂದ್ದಂತೆ ಶಶಾಂಕ್ ಕಾಲುಗಳು ಊದಲು ಶುರುವಾಗಿದ್ದು, ಹೆಚ್ಚಿನ ಕಡೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನಕ್ಕೆ ಬಂದಿರಲಿಲ್ಲ.

ಅದಲ್ಲದೇ ಕೆಲ ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿ ತೀವ್ರ ಜ್ವರ ಕಾಣಿಸಿಕೊಂಡಿದ್ದು ಪೋಷಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಕೂಡಾ ಸಿಗದೇ, ಖಾಸಗಿ ವಾಹನವೊಂದರಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಹೃದಯದಲ್ಲಿ ಹೋಳು ಇರುವುದನ್ನು ಪತ್ತೆ ಹಚ್ಚಿದ್ದು,ಚಿಕಿತ್ಸೆ ಮುಂದುವರಿಸಿದ್ದಾರೆ. ಆದರೆ ವಿಧಿಯಾಟ,ಶಶಾಂಕ್ ನ ಜೀವ ಉಳಿಸಲು ವೈದ್ಯರು ಪ್ರಯತ್ನ ಪಟ್ಟರಾದರೂ, ವಿಧಿಯು ಕರುಣೆ ಇಲ್ಲದಂತೆ ತನ್ನತ್ತ ಕರೆದೊಯ್ಯಿತು.

ಸದ್ಯ ಮೃತ ಯುವಕನ ಪೋಷಕರು ಯುವಕನ ಕಣ್ಣುಗಳನ್ನು ದಾನ ಮಾಡಲು ಮನಸ್ಸು ಮಾಡಿದ್ದು, ಅವನಿಂದಾಗಿ ಇನ್ನೊಬ್ಬರ ಬಾಳು ಬೆಳಕಾಗಲಿ ಎಂದು ಮಗನ ಸಾವಿನ ನೋವಿನ ನಡುವೆ ಖುಷಿ ವ್ಯಕ್ತಪಡಿಸಿದ್ದಾರೆ.

Leave A Reply