ಮುಖ್ಯಮಂತ್ರಿ ಬದಲಾವಣೆಗೆ ದೊಡ್ಡ ದೊಡ್ಡ ಸಂಧಾನ,ಆಮಿಷ- ಬಸನಗೌಡ ಪಾಟೀಲ್ ಯತ್ನಾಳ್

ಬೆಳಗಾವಿ : ಮುಖ್ಯಮಂತ್ರಿ ಬದಲಾವಣೆಗೆ ದೊಡ್ಡ ದೊಡ್ಡ ಸಂಧಾನ ಮಾಡುತ್ತಿರುವುದು ನಿಜ. ಇಂತವರನ್ನು ಒಪ್ಪುವ ಕೀಳುಮಟ್ಟದ ರಾಜಕಾರಣಿ ನಾನಲ್ಲ. ಇಂತಹ ಆಯೋಗ್ಯನ ಜೊತೆ ನಾನು ಸೇರುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪರೋಕ್ಷವಾಗಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ತಿರುಗೇಟು ನೀಡಿದರು.

ಬುಧವಾರ ಸಚಿವ ಈಶ್ವರಪ್ಪ, ಯತ್ನಾಳ್, ಮುರುಗೇಶ್ ನಿರಾಣಿ‌ ಸಭೆ ನಡೆಸಿದ್ದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, “ಮುಖ್ಯಮಂತ್ರಿ ಆಗುತ್ತೇನೆಂದು ಯಾರ್ಯಾರೋ‌ ಹಗಲು ಕನಸು ಕಾಣುತ್ತಿದ್ದಾರೆ. ಸೂಟು ಹೊಲಿಸಿಕೊಂಡವರೂ ಇದ್ದಾರೆ. ದೊಡ್ಡವರಿಗೆ ಹಣ ಕೊಟ್ಟಿದ್ದೇನೆ, ರಿಸರ್ವ್ ಇಟ್ಟಿದ್ದೇನೆ ಎನ್ನುತ್ತಿದ್ದಾರೆ. ಆದರೆ ಇಲ್ಲಿ ಅವರ ಆಸೆಗಳು ನಡೆಯಲ್ಲ. ಇಲ್ಲಿ ಇರುವುದು ನರೇಂದ್ರ ಮೋದಿಯವರು. ಇಂತಹ ಆಯೋಗ್ಯರನ್ನು ವರಿಷ್ಠರು ಸಿಎಂ ಮಾಡುವುದಿಲ್ಲ. ಭೋಗದ ವಸ್ತುಗಳನ್ನ ಕೊಡುವವರನ್ನು ಸಿಎಂ ಮಾಡುವುದಿಲ್ಲ ಎಂದರು.

ನನಗೆ ಆಮಿಷ ಒಡ್ಡುತ್ತಿದ್ದಾರೆ. ಮಂತ್ರಿ ಮಾಡುತ್ತೇನೆ, ಡಿಸಿಎಂ ಮಾಡುತ್ತೇನೆ ಎನ್ನುತ್ತಿದ್ದಾರೆ. ಜನವರಿ ಎರಡನೇ ವಾರದಲ್ಲಿ ಸಿಎಂ ಆಗುತ್ತೇನೆಂದು ಕನಸು ಕಾಣುತ್ತಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ ಎಂದು ಯತ್ನಾಳ್ ಹೇಳಿದರು.

Leave A Reply

Your email address will not be published.