ಈರುಳ್ಳಿ ಹೊತ್ತು ಬೆಂಗಳೂರಿಗೆ ಹೊರಟಿದ್ದವರಿಗೆ ದಾರಿ ಮಧ್ಯೆಯೇ ಅಡ್ಡ ಬಂದ ಜವರಾಯ!! ಈರುಳ್ಳಿ ಸಾಗಾಟದ ಲಾರಿಗೆ ಟ್ಯಾಂಕರ್ ಡಿಕ್ಕಿಯಾಗಿ ನಾಲ್ವರ ಸಾವು-ಓರ್ವ ಗಂಭೀರ

ಚಿತ್ರದುರ್ಗ: ಗ್ಯಾಸ್ ಟ್ಯಾಂಕರ್ ಈರುಳ್ಳಿ ಸಾಗಟದ ಲಾರಿಗೆ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 40 ರಲ್ಲಿ ಇಂದು ಬೆಳಗ್ಗೆ ನಡೆದಿದೆ.

ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು,ಲಾರಿಯಲ್ಲಿ ಈರುಳ್ಳಿ ಹಾಕಿಕೊಂಡು ಬೆಂಗಳೂರಿನತ್ತ ಹೋಗುತ್ತಿರುವಾಗ ನಸುಕಿನ‌ ಜಾವ ಟೈರ್ ಪಂಕ್ಚರ್ ಆಗಿದೆ.ಈ ಹಿನ್ನೆಲೆಯಲ್ಲಿ ಹೆದ್ದಾರಿಯ ಪಕ್ಕದಲ್ಲಿ ಲಾರಿ ನಿಲ್ಲಿಸಿ ಪಂಚರ್ ಸರಿಪಡಿಸುವ ಕೆಲಸದಲ್ಲಿ ಲಾರಿಯಲ್ಲಿದ್ದ ಐದು ಜನ ನಿರತರಾಗಿರುವಾಗ,ಹಿಂಬದಿಯಿಂದ ಯಮರೂಪಿಯಾಗಿ ಬಂದ ಟ್ಯಾಂಕರ್ ಐವರ ಮೇಲೂ ಹರಿದಿದೆ. ನಾಲ್ವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಓರ್ವನ ಸ್ಥಿತಿ ತೀರಾ ಗಂಭೀರವಾಗಿದೆ.

ಘಟನೆಯಲ್ಲಿ ರಾಯಚೂರಿನ ಹುಲುಗಪ್ಪ, ಕುಷ್ಟಗಿಯ ಮಂಜುನಾಥ, ವಿಜಯಪುರದ ಸಂಜಯ್ ಮತ್ತು ರೋಣದ ಶರಣಪ್ಪ ಸಾವನ್ನಪ್ಪಿದ್ದಾರೆ.ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು,ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply

Your email address will not be published.