ನೂಜಿಬಾಳ್ತಿಲ: ಆರ್ಥಿಕ ಸಂಕಷ್ಟ ಹಿನ್ನಲೆ | ತಾಯಿಯ ಸ್ವ ಇಚ್ಛೆಯಂತೆ ಮೂವರು ಮಕ್ಕಳು ಪುತ್ತೂರಿನ ಆಶ್ರಮಕ್ಕೆ

ತಾಯಿಯ ಸ್ವ ಇಚ್ಛೆಯಂತೆ ಮೂವರು ಮಕ್ಕಳು ಪುತ್ತೂರಿನ ಆಶ್ರಮಕ್ಕೆ

ಸುಬ್ರಹ್ಮಣ್ಯ, ಆ.14: ಪತಿ ನಿಧನದಿಂದ ಮಹಿಳೆಗೆ ಮಕ್ಕಳನ್ನು ನೋಡಿಕೊಳ್ಳಲು ಕಷ್ಟಸಾಧ್ಯವಾದ ಹಿನ್ನಲೆಯಲ್ಲಿ ಮಹಿಳೆಯು ಮಕ್ಕಳ ರಕ್ಷಣಾ ಘಟಕ ಮಂಗಳೂರಿಗೆ ಪತ್ರ ಮುಖೇನ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಅಲ್ಲಿನ ಅಧಿಕಾರಿಗಳ ಆದೇಶದಂತೆ ಮಹಿಳೆಯ ಮೂವರು ಮಕ್ಕಳನ್ನು ಪುತ್ತೂರಿನ ಆಶ್ರಮಕ್ಕೆ ಸೇರಿಸಿರುವ ಬಗ್ಗೆ ವರದಿಯಾಗಿದೆ.


ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕೋಡಿಗದ್ದೆ ಎಂಬಲ್ಲಿ ವಾಸಿಸುತ್ತಿದ್ದ ಗೋಪಾಲಕೃಷ್ಣ ಎಂಬವರು ಇತ್ತೀಚೆಗೆ ನಿಧನರಾಗಿದ್ದು, ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಹೊಂದಿದ್ದರು.


ಪತಿಯ ನಿಧನದ ಬಳಿಕ ಪತ್ನಿಗೆ ಅವರ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದ ಕಾರಣ ಜೀವನ ನಡೆಸಲು ಕಷ್ಟವಾಗಿತ್ತು. ಅವರ ಅತ್ತೆ ಮಾವ ವಯೋ ವೃದ್ಧರಾಗಿದ್ದರಿಂದ ದುಡಿಯಲು ಅಸಕ್ತರಾಗಿದ್ದು, ಇದರಿಂದಾಗಿ ತೀರಾ ಸಂಕಷ್ಟದಲ್ಲಿರುವ ವಿಷಯ ಇಲಾಖೆಯ ಗಮನಕ್ಕೆ ಬಂದಿದ್ದು ಇದಕ್ಕೆ ತಕ್ಷಣ ಸ್ಪಂದಿಸಿ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಆಶ್ರಮಕ್ಕೆ ಸೇರಿಸಲು ಸಿದ್ಧತೆ ನಡೆಸಲಾಯಿತು ಹಾಗೂ ಈ ಬಗ್ಗೆ ಮಂಗಳೂರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು. ಮಹಿಳೆಯು ಸ್ವ ಇಚ್ಚೆಯಂತೆ ಮಕ್ಕಳನ್ನು ಕಳುಹಿಸಲು ಒಪ್ಪಿದ್ದರು ಎನ್ನಲಾಗಿದೆ.


ಅದರಂತೆ ಮಾಹಿತಿ ತಿಳಿದ ಮಂಗಳೂರು ಮಕ್ಕಳ ರಕ್ಷಣಾ ಘಟಕದ‌ ಅಧಿಕಾರಿಗಳ ಆದೇಶದಂತೆ ನೂಜಿಬಾಳ್ತಿಲದ ಮಹಿಳೆಯ ಮನೆ ಬೇಟಿ ನಡೆಸಿದ ಸ್ಥಳೀಯ ಅಧಿಕಾರಿಗಳ ತಂಡ ಮನೆಯಲ್ಲಿ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದರು.


ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಜೆ. ಎ ಅವರ ನಿರ್ದೇಶದಂತೆ ಕಡಬ ವಲಯ ಮೇಲ್ವಿಚಾರಕಿ ಭವಾನಿ ಆರ್ತಿಲ, ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ, ಪಿಡಿಒ ಆನಂದ, ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ನೇತೃತ್ವದಲ್ಲಿ ಹಾಗೂ ಮಕ್ಕಳ ತಾಯಿ, ಕುಟುಂಬದ ಸಂಬಂಧಿಕರ ಸಹಕಾರದಲ್ಲಿ ರೇವತಿ ಅವರ ಮೂವರು ಮಕ್ಕಳನ್ನು ಪುತ್ತೂರಿನ ನೆಲ್ಲಿಕಟ್ಟೆ ಶ್ರೀ ರಾಮಕೃಷ್ಣ ಸೇವಾಶ್ರಮಕ್ಕೆ ಕರೆದೊಯ್ಯಲಾಗಿ, ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave A Reply

Your email address will not be published.