ಕಾರ್ಕಳ | 3 ವರ್ಷದ ಮಗುವಿನ ಜತೆ ಕೆರೆಗೆ ಬಿದ್ದು ಮೃತಪಟ್ಟ ತಾಯಿ | ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿರುವ ಶಂಕೆ

Share the Article

ಕಾರ್ಕಳ: ನಾಪತ್ತೆಯಾಗಿದ್ದ ತಾಯಿ ಮತ್ತು ಮಗು ಶವವಾಗಿ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಮಡಿವಾಳಕಟ್ಟೆಯಲ್ಲಿ ನಡೆದಿದೆ.

ಕೆರ್ವಾಶೆ ಗ್ರಾಮದ ಕಡ್ಡಾಲ್ ನಿವಾಸಿಗಳಾದ ಸೌಮ್ಯ (27) ಹಾಗೂ ಅವರ ಮಗ ಆರೂಷ್(3) ಮೃತಪಟ್ಟವರು ಎಂದು ತಿಳಿದುಬಂದಿದೆ.

ಸೌಮ್ಯಳು ಸುಮಾರು 7 ದಿನಗಳಿಂದ ಕರ್ವಾಶಯ ಶಾಲೆಯ ಬಳಿ ಟೈಲರಿಂಗ್ ಕೆಲಸವನ್ನು ಕಲಿಯಲು ಹೋಗುತ್ತಿದ್ದರು. ಮೊನ್ನೆ ಮಧ್ಯಾಹ್ನ 1.30ಕ್ಕೆ ಎಂದಿನಂತೆ ಟೈಲರಿಂಗ್ ಕಲಿಯಲೆಂದು ಮನೆಯಿಂದ ಹೋಗುವಾಗ ತನ್ನ ಮಗ ಆರೂಷ್‌ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು.

ಸಂಜೆಯ ಸಮಯವಾದರೂ ಅವರಿಬ್ಬರು ಮನೆಗೆ ಹಿಂತಿರುಗದಾಗ, ಗಾಬರಿಗೊಂಡ ಮನೆಯವರು ಅವರಿಬ್ಬರನ್ನು ಹುಡುಕುತ್ತಾ ಹೋದಾಗ ಮಡಿವಾಳಕಟ್ಟೆಯ ಕೆರೆಯ ನೀರಿನಲ್ಲಿ ಆರೂಷ್ ಧರಿಸಿದ ಚಪ್ಪಲಿ ನೀರಿನಲ್ಲಿ ತೇಲಾಡುತ್ತಿತ್ತು.

ನಂತರ ಸ್ಥಳೀಯ ಈಜುಗಾರರು ಕೆರೆಯಲ್ಲಿ ಮುಳುಗಿ ಹುಡುಕಾಡಿದಾಗ, ಸೌಮ್ಯ ಹಾಗೂ ಆರೂಷ್ ಅವರಿಬ್ಬರ ಮೃತದೇಹ ಪತ್ತೆಯಾಗಿದೆ.

ಕೆರೆಯ ಬದಿಯಲ್ಲಿರುವ ದಾರಿ ಮೂಲಕ ಅವರು ಮನೆಯ ಕಡೆಗೆ ಬರುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Leave A Reply