ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ವಂಚನೆ | ತಹಶೀಲ್ದಾರ್ ವಿರುದ್ಧ ಆರೋಪ

Share the Article

ಉಡುಪಿ : ಪರಿಶಿಷ್ಟ ಜಾತಿಯ ನಕಲಿ ಪ್ರಮಾಣ ಪತ್ರ ಸಲ್ಲಿಸಿ ಸರಕಾರಕ್ಕೆ ವಂಚಿಸಿರುವ ದೂರಿನ ಹಿನ್ನೆಲೆಯಲ್ಲಿ ಬ್ರಹ್ಮಾವರ ತಹಶೀಲ್ದಾರ್ ಆಗಿದ್ದ ಪ್ರಸ್ತುತ ಕುಂದಾಪುರ ತಹಶೀಲ್ದಾರ್ ಆಗಿರುವ ಕಿರಣ್ ಜಿ. ಗೌರಯ್ಯ ಅವರನ್ನು ಮುಂದಿನ ಆದೇಶದವರೆಗೆ ವರ್ಗಾಯಿಸಿ ಮುಂದಿನ ಸ್ಥಳ ನಿಯುಕ್ತಿಗಾಗಿ ಸರಕಾರದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ನೀಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಕಿರಣ್ ಅವರು ಮೊಗೇರ ಜಾತಿಯ ನಕಲಿ ಪ್ರಮಾಣ ಪತ್ರ ಸಲ್ಲಿಸಿ ಸರಕಾರಕ್ಕೆ ಹಾಗೂ ಪರಿಶಿಷ್ಟ ಜಾತಿಯವರಿಗೆ ವಂಚಿಸಿ ಉನ್ನತ ಮಟ್ಟದ ಹುದ್ದೆಗೆ ಮುಂಭಡ್ತಿ ಪಡೆದಿದ್ದು ಮಾತ್ರವಲ್ಲದೆ ಪತ್ನಿಗೆ ಉನ್ನತ ಹುದ್ದೆ ಕೊಡಿಸಿ, ಮಕ್ಕಳಿಗೆ ಮೀಸಲಾತಿ ಅಡಿಯಲ್ಲಿ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಸೀಟು ಪಡೆದುಕೊಂಡು ಸರಕಾರಕ್ಕೆ ವಂಚನೆ ಮಾಡಿದ್ದಾರೆ.

ತಹಶೀಲ್ದಾರ್ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ರದ್ದು ಮಾಡಿ ಕ್ರಿಮಿನಲ್ ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದಸಂಸ ಭೀಮವಾದ ರಾಜ್ಯ ಸಂಘಟನ ಸಂಚಾಲಕ ಶೇಖರ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಉಡುಪಿ ಅಪರ ಜಿಲ್ಲಾಧಿಕಾರಿ ಜು 17ರಂದು ಈ ಆದೇಶ ಹೊರಡಿಸಿದ್ದಾರೆ.

Leave A Reply