ಚಿಕ್ಕಮಗಳೂರು | ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದು ಕಾರು ಚಾಲಕ ಸಜೀವ ದಹನ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ವಸ್ತಾರೆ ಎಂಬಲ್ಲಿ ಕಾರೊಂದು ಹೊತ್ತಿ ಉರಿದಿದ್ದು, ಕಾರು ಚಾಲಕ ಕಾರಿನೊಳಗೇ ಸಜೀವ ದಹನವಾಗಿರುವ ಘಟನೆ ಇಂದು ರಾತ್ರಿ ನಡೆದಿದೆ.

ಮೃತ ವ್ಯಕ್ತಿ ಕಾರು ಚಾಲಕ ಅರೆನೂರು ಗ್ರಾಮದ ವಾಸಿ ರಘು ಎಂದು ಗುರುತಿಸಲಾಗಿದ್ದು,ಆತ ತನ್ನ ಕಾರಿನಲ್ಲಿ ಚಿಕ್ಕಮಗಳೂರಿಗೆ ಹೋಗಿ ಆಲ್ದೂರಿಗೆ ಬರುವ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಾಗ, ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಸಾಧ್ಯವಾಗದೇ ಆತ ಕಾರಿನೊಳಗೆ ಅಸಹಾಯಕನಾಗಿ ಉಳಿದು ಕಾರಿನ ಜೊತೆಗೆ ಆತನು ಉರಿದು ಹೋಗಬೇಕಾಯಿತು. ಆತ ತನ್ನ ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಸುತ್ತಮುತ್ತಲಿನವರು ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಾ ನಿಲ್ಲಬೇಕಾಯಿತು. ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಕೆಲಕಾಲ ರಸ್ತೆ ಸಂಪೂರ್ಣ ಬಂದ್ ಆಗಿತ್ತು.

ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು,ಕಾರಿನಲಿದ್ದ ಮೃತದೇಹವನ್ನು ಹೊರತೆಗೆದು ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟರು. ಮೃತ ವ್ಯಕ್ತಿ ರಘು ಕಾಫಿ ಟಿಂಬರ್ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಘಟನಾ ಸ್ಥಳಕ್ಕೆ ಆಲ್ದೂರು ಪಿಎಸ್ಐ ಶಿವರುದ್ರಮ್ಮ ಹಾಗು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ನಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

Leave A Reply

Your email address will not be published.