ಆರತಿಗೊಂದು ಕೀರುತಿಗೊಂದು – ಇನ್ನು ಎರಡೇ ಮಕ್ಲಂತೆ | ತಪ್ಪಿದ್ರೆ ಸವಲತ್ತು ಕಟ್ಟಂತೆ

ಲಖನೌ: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಸರ್ಕಾರದ ಯೋಜನೆಗಳ ಸೌಲಭ್ಯ ದೊರೆಯದಂತೆ ತಡೆಯುವ ನಿಟ್ಟಿನಲ್ಲಿ ಕಾನೂನು ರೂಪಿಸಲು ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸುತ್ತಿದೆ.

ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಕಾನೂನು ಆಯೋಗವು ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದು, ಅದನ್ನು ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಬಲ್ಲ ಮೂಲಗಳು ಹೇಳಿವೆ. ಕರಡು ತಯಾರಿಸಲು ಕನಿಷ್ಠ 2 ತಿಂಗಳು ಬೇಕಾಗಬಹುದು ಎನ್ನಲಾಗಿದೆ.

ಉತ್ತರ ಪ್ರದೇಶದಲ್ಲಿ ಈಗ 22 ಕೋಟಿ ಜನಸಂಖ್ಯೆ ಇದೆ. ಇಷ್ಟು ಪ್ರಮಾಣದ ಜನಸಂಖ್ಯೆ ಏಷ್ಟೋ ದೇಶಗಳಲ್ಲಿಯೂ ಇಲ್ಲ. ಈ ರೀತಿ ಹೆಚ್ಚುತ್ತಿರುವ ಜನಸಂಖ್ಯೆಯು ರಾಜ್ಯದ ಸಂಪನ್ಮೂಲಗಳ ಮೇಲೆ ಪ್ರಭಾವ ಬೀರಿದೆ. ಜನಸಂಖ್ಯೆ ಹೆಚ್ಚಳವು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶ ದೊರೆಯುತ್ತಿಲ್ಲ. ಆಸ್ಪತ್ರೆಗಳಲ್ಲೂ ಸಮಸ್ಯೆ ಉಂಟಾಗುತ್ತಿದೆ ಎಂದು ಕಾನೂನು ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಆದಿತ್ಯನಾಥ್ ಮಿತ್ತಲ್ ಅಭಿಪ್ರಾಯಪಟ್ಟಿದ್ದಾರೆ.

ಜಾರಿಗೆ ತರಲು ಯೋಜಿಸಲಾಗಿರುವ ಹೊಸ ಕಾನೂನು, ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸಂಬಂಧಪಟ್ಟಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದ್ರೆ ಇದರ ಬಗ್ಗೆ ಈಗಾಗಲೇ ಧರ್ಮ- ರಾಜಕೀಯ ಶುರುವಾಗಿದೆ.

ಅತ್ತ ಅಸ್ಸಾಂ ಸರ್ಕಾರ ಕೂಡ 2 ಮಕ್ಕಳ ಸಂಸಾರದ ಬಗ್ಗೆ ಪ್ಲಾನ್ ಶುರುಮಾಡಿದೆ. ಇಬ್ಬರಿಗಿಂತ ಹೆಚ್ಚು ಮಕ್ಕಳು ಹೊಂದುವ ಕುಟುಂಬಕ್ಕೆ ಕೆಲವು ಸವಲತ್ತುಗಳನ್ನು ಕಡಿತ ಮಾಡುವ ಯೋಜನೆ ಕಾರ್ಯರೂಪಕ್ಕೆ ತರಲು ಅಲ್ಲಿನ ಮುಖ್ಯಮಂತ್ರಿ ಯೋಜನೆ ರೂಪಿಸುತ್ತಿದ್ದಾರೆ.

Leave A Reply

Your email address will not be published.