ಮೊಬೈಲ್ ನಲ್ಲಿ ಸ್ವಲ್ಪ ಮಾತು ಕಮ್ಮಿ ಮಾಡು ಮಾರಾಯ್ತಿ ಅಂದದ್ದೆ ತಪ್ಪಾಯ್ತು | ಅಷ್ಟಕ್ಕೇ ಪತ್ನಿ ಗಂಡನಿಗೆ ಸುಪಾರಿ ಕೊಡೋದಾ ?!

ಮನೆಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಹರಟುತ್ತಿದ್ದ ಯಾರಿಗಾದರೂ ಬುದ್ದಿ ಹೇಳಿದರೆ ಕೊಲೆ ಮಾಡುವ ಹಂತಕ್ಕೆ ಹೋಗ್ತಾರಾ ?! ಇಲ್ಲೊಬ್ಬಳು ಪತಿವ್ರತೆ ಪತಿಯನ್ನೇ ಕೊಲ್ಲಲು ಸುಪಾರಿ ನೀಡಿ, ಆ ಹತ್ಯಾ ಪ್ರಯತ್ನದ ವೇಳೆ ಪತ್ನಿ ಸಿಕ್ಕಿಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಸರಸ್ವತಿ ಸುತಾರ ಎಂಬಾಕೆಯೇ ಪತಿಯ ಕೊಲೆಗೆ ಸುಪಾರಿ ನೀಡಿದ ಮಹಾಸತಿ.

ಈಕೆ ದಾಂಡೇಲಿಯ ಅಂಕುಷ ರಾಮಾ ಸುತಾರ ಎಂಬುವವನನ್ನು ಆರು ವರ್ಷದ ಹಿಂದೆ ಮದುವೆಯಾಗಿದ್ದು, ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೀಗಾಗಿ ಮನೆಯಲ್ಲಿ ಸಮಯ ಕಳೆಯಲು ನೆಂಟರು ಹಾಗೂ ಪರಿಚಯಸ್ಥರೊಂದಿಗೆ ಮೊಬೈಲ್ ನಲ್ಲಿ ಕರೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದಳು. ಆಕೆ ಆರೀತಿ ಮೊಬೈಲಿನಲ್ಲಿ ಕಾಲಹರಣ ಮಾಡುವುದನ್ನು ಪತಿ ಪ್ರಶ್ನಿಸಿದ್ದಾನೆ. ಅಷ್ಟಕ್ಕೇ ಮುನಿಸಿಕೊಂಡ ಮಹಿಳೆ ಪತಿಯ ಮರ್ಡರ್ ಗೆ ಸುಪಾರಿ ನೀಡಿದ್ದಾಳೆ.

ಅಂದು ಅಂಕುಷ ರಾಮಾ ಸುತಾರ ಮನೆಯಲ್ಲಿಯೇ ಇದ್ದ. ಅವತ್ತು ಆತನ ಮನೆಗೆ ಗಣೇಶ್ ಶಾಂತರಾಂ ಎಂಬುವವ, ಇಬ್ಬರು ಅಪ್ರಾಪ್ತ ಬಾಲಕರೊಂದಿಗೆ ಈಕೆಯ ಮನೆಗೆ ಆಗಮಿಸಿದ್ದಾನೆ. ಅವರು ಮನೆಯಲ್ಲಿದ್ದ ಅಂಕುಷ ರಾಮಾ ಸುತಾರನನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಆಕೆಯ ಗಂಡ ನೋವಿನಿಂದ ಕೂಗಿಕೊಂಡಾಗ ಪಕ್ಕದ ಮನೆಯಲ್ಲಿದ್ದ ಸಹೋದರರು ಓಡಿ ಬಂದಿದ್ದಾರೆ. ಈ ವೇಳೆ ಹತ್ಯೆ ಮಾಡಲು ಬಂದಿದ್ದ ಇಬ್ಬರು ಅಪ್ರಾಪ್ತರು ಹೆದರಿ ಓಡಿಹೋಗಿದ್ದು, ಸುಪಾರಿ ತೆಗೆದುಕೊಂಡ ಗಣೇಶ್ ಶಾಂತರಾಂ ಆಕೆಯ ಗಂಡನ ಸಹೋದರನ ಕೈಗೆ ಸಿಕ್ಕಿಬಿದ್ದಿದ್ದಾನೆ. ಹಾಗೆ ಬಂಧಿಸಲಾದ ಆರೋಪಿಯನ್ನು ವಿಚಾರಿಸಿದಾಗ ಪತ್ನಿ ಕೊಟ್ಟ ಸುಪಾರಿ ಕಥೆ ಹೊರಕ್ಕೆ ಬಂದಿದೆ.

ಆಕೆ ತನ್ನ ಗಂಡನನ್ನು ಕೊಲ್ಲಿಸಲು ಜುಜುಬಿ ರೂಪಾಯಿ 30,000 ನೀಡಿದ್ದಳು. ಗಣೇಶ್ ಶಾಂತರಾಂ ಅಷ್ಟು ಕಡಿಮೆ ದುಡ್ಡಿನಲ್ಲಿ ಹೊರಗಿನಿಂದ ಜನ ತರಲು ಶಕ್ತನಾಗಿಲ್ಲ. ಹಾಗಾಗಿ ಅಬ್ಬೇಪಾರಿಯಂತೆ ಅಲೆಯುತ್ತಿರುವ ಇಬ್ಬರು ಅಪ್ರಾಪ್ತ ವಯಸ್ಕರನ್ನು ತನ್ನೊಂದಿಗೆ ಕರೆದುಕೊಂಡು ಬಂದಿದ್ದಾನೆ. ಇನ್ನೇನು ಕತ್ತು ಹಿಸುಕಿ ಕೊಲೆ ಮಾಡುವ ಹಂತದಲ್ಲಿ ಆಕೆಯ ಗಂಡ ಕೂಗಿಕೊಂಡಾಗ ಹೆದರಿದ ಹೈಕ್ಳು ಓಡಿ ಹೋಗಿದ್ದಾರೆ. ಏನು ಮಾಡಬೇಕೆಂದು ತಬ್ಬಿಬ್ಬಾದ ಗಣೇಶ್ ಸುತಾರಾಂ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ.

ಘಟನೆ ಸಂಬಂಧ ದಾಂಡೇಲಿಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಸ್ವತಿ ಸುತಾರ ಮತ್ತು ಬೆಳಗಾವಿ ಮೂಲದ ಗಣೇಶ ಶಾಂತರಾಂ ಪಾಟೀಲ್ ನನ್ನು ಬಂಧಿಸಿದ್ದಾರೆ ಹಾಗೂ ಇಬ್ಬರು ಅಪ್ರಾಪ್ತರನ್ನು ಹಿಡಿಯಲು ಬಲೆ ಬೀಸಿದ್ದಾರೆ.

Leave A Reply

Your email address will not be published.