ಸಾವಿನಲ್ಲೂ ಒಂದಾದ ತಾಯಿ – ಮಗ | ಕೆಲವೇ ಗಂಟೆಗಳ ಅಂತರದಲ್ಲಿ ತಾಯಿ-ಮಗ ಕೋವಿಡ್ ಗೆ ಬಲಿ

ದೇಶದಲ್ಲಿ ಕೊರೊನಾ ಸೋಂಕು ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಅದೆಷ್ಟು ಮನಕಲುಕುವ ಘಟನೆಗಳು ನಡೆದಿವೆ. ಅದರಂತೆಯೇ ಕೆಲವೇ ಗಂಟೆಗಳ ಅಂತರದಲ್ಲಿ ತಾಯಿ ಮತ್ತು ಮಗ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಬಸವನಗುಡಿಯಲ್ಲಿ ನಡೆದಿದೆ.

ಬಸವನಗುಡಿ ನಾಲ್ಕನೆ ಅಡ್ಡರಸ್ತೆಯ ಪ್ಲಾಸ್ಟಿಕ್ ವ್ಯಾಪಾರಿ ಸುರೇಶ್ ಕೊರೋನಾಗೆ ತುತ್ತಾಗಿದ್ದರು. ಕಳೆದ ಹತ್ತು ದಿನದಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತಾದರೂ, ಸೋಮವಾರ ಮಧ್ಯಾಹ್ನದ ಹೊತ್ತಿಗೆ ಸ್ಥಿತಿ ಗಂಭೀರವಾಗಿದೆ. ವೈದ್ಯರು ಈ ವಿಚಾರವನ್ನು ಸುರೇಶ್ ಅವರ ಮನೆಗೆ ತಿಳಿಸಿದ್ದರು.

ಸುರೇಶ್ ಅವರ ಸ್ಥಿತಿ ಗಂಭೀರವಾಗಿರುವ ವಿಚಾರ ತಿಳಿದು ತಾಯಿ ಗೌರಮ್ಮ ಆಘಾತಕ್ಕೊಳಗಾಗಿದ್ದರು. ಸಂಜೆ ಆರು ಗಂಟೆ ಹೊತ್ತಿಗೆ ಮನೆಯಲ್ಲೇ ಗೌರಮ್ಮ ಕೊನೆಯುಸಿರೆಳೆದಿದ್ದಾರೆ. ಇದಾಗಿ ಐದು ಗಂಟೆ ಕಳೆಯುವುದರಲ್ಲಿ ಸುರೇಶ್ ಅವರು ಕರೋನಾಗೆ ಬಲಿಯಾಗಿದ್ದಾರೆ. ಸುರೇಶ್ ಅವರು ಪತ್ನಿ ಹಾಗೂ ತನ್ನ ಎರಡು ಪುತ್ರಿಯರನ್ನು ಅಗಲಿದ್ದಾರೆ.

Leave A Reply

Your email address will not be published.