ರಾಮಕುಂಜ | ಚಿಕನ್ ಸೆಂಟರ್, ಮನೆಯಲ್ಲಿ ದನದ ಮಾಂಸ ಮಾರಾಟ ಪೋಲಿಸ್ ದಾಳಿ ಓರ್ವ ವಶಕ್ಕೆ | ಇನ್ನೋರ್ವ ಪರಾರಿ

ಕಡಬ: ರಾಮಕುಂಜ ಗ್ರಾಮದ ನೀರಾಜೆ ಎಂಬಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸಿ ದನದ ಮಾಂಸ ಮಾರಾಟ ಮಾಡುತ್ತಿರುವುದು ಮತ್ತು ಆತೂರು ಡಿಲೈಟ್ ಚಿಕನ್ ಸೆಂಟರ್ ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಕಡಬ ಪೋಲಿಸರು ಮಾಂಸವನ್ನು ವಶಪಡಿಸಿಕೊಂಡು ಓರ್ವನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ ಘಟನೆ ಮೇ.22ರಂದು ನಡೆದಿದೆ.

ಈ ಸಂದರ್ಭದಲ್ಲಿ ಓರ್ವ ಪರಾರಿಯಾದ ಘಟನೆ ನಡೆದಿದೆ. ಎರಡು ಪ್ರಕರಣದಲ್ಲಿ 23 ಕೆ.ಜಿ. ಮಾಂಸ ವಶಪಡಿಸಿಕೊಂಡ ಪೋಲಿಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ರಾಮಕುಂಜ ಗ್ರಾಮದ ಆತೂರು ಡಿಲೈಟ್ ಚಿಕನ್ ಸೆಂಟರ್ ಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಕಡಬ ಪೋಲಿಸರು ಚಿಕನ್ ಸೆಂಟರ್ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಮಾಲಕ ರಾಮಕುಂಜ ನಿವಾಸಿ ಮಹಮ್ಮದ್ ಎಂಬವರನ್ನು ವಶಕ್ಕೆ ಪಡೆದು, ಪ್ರಿಜ್ಜಲ್ಲಿರಿಸಿದ 9 ಕೆ.ಜಿ ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಮನೆಯಲ್ಲಿ ಮಾಂಸ ಮಾರಾಟ

ರಾಮಕುಂಜ ಗ್ರಾಮದ ಆತೂರು ಡಿಲೈಟ್ ಚಿಕನ್ ಸೆಂಟರ್ಗೆ ಮಾಂಸ ಮಾರಾಟ ಮಾಡುತ್ತಿರುವ ನೀರಾಜೆ ಎಂಬಲ್ಲಿರುವ ಸಿರಾಜ್ ಎಂಬಾತನ ಮನೆಗೆ ದಾಳಿ ನಡೆಸಿದ ಪೋಲಿಸರು ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 14 ಕೆ.ಜಿ ಮಾಂಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ, ಈ ಸಂದರ್ಭದಲ್ಲಿ ಆರೋಪಿ ಸಿರಾಜ್ ಪರಾರಿಯಾಗಿದ್ದಾರೆ.

ಈ ಬಗ್ಗೆ ಸಿರಾಜ್ ವಿರುದ್ದ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಕಡಬ ಎಸ್.ಐ.ರುಕ್ಮ ನಾಯ್ಕ್, ಸಿಬ್ಬಂದಿಗಳಾದ ಭವಿತ್ ರೈ, ಶ್ರೀ ಶೈಲ, ಮಹೇಶ್, ಸೋಮಯ್ಯ ಭಾಗವಹಿಸಿದ್ದರು.

Leave A Reply

Your email address will not be published.