ಅಡಿಕೆ ಕಳ್ಳರಾ ಅಥವಾ ಗಾಂಜಾ ದಂಧೆಯಾ ? | ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಪಾಲೆತ್ತಡಿ | ಅನುಮಾನಾಸ್ಪದ ವ್ಯಕ್ತಿಯ ವಿಚಾರಣೆ ಶುರು

ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಪಾಲೆತ್ತಡಿ ಎಂಬಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು  ಹಿಡಿದು ಪೊಲೀಸ್ ಗೆ ಒಪ್ಪಿಸಿದ್ದಾರೆ.

ಘಟನೆಯು ಇಂದು 10.30 ರ ಸುಮಾರಿಗೆ ನಡೆದಿದೆ. ಹಿರೇಬಂಡಾಡಿ ಶಾಲಾ ಕಾಪೌಂಡ್ ಬಳಿ ಒಂದು ಒಂದು ರಿಕ್ಷಾ ಮತ್ತು ಒಂದು ಬೈಕು ನಿಂತಿತ್ತು. ಆಗ ಅಲ್ಲಿಗೆ ಬಂದ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಅಲಿ ಅವರು ವಿಚಾರಿಸಲಾಗಿ ವ್ಯಕ್ತಿಗಳು ಸಮರ್ಪಕವಾಗಿ ಉತ್ತರಿಸಲಿಲ್ಲ. ಅಲ್ಲಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪಂಚಾಯತ್ ಗೆ ಹೋಗಿ ಇನ್ನೊಬ್ಬರನ್ನು ಕರೆದುಕೊಂಡು ವಾಪಸ್ಸು ಬರುವಷ್ಟರಲ್ಲಿ ಅಲ್ಲಿದ್ದ ರಿಕ್ಷಾ ಮಾಯವಾಗಿತ್ತು. ಆಟೋದಲ್ಲಿ ಒಣಗಿದ ಅಡಿಕೆ ಇತ್ತೆನ್ನಲಾಗಿದೆ.

ಅದೇ ಸಮಯದಲ್ಲಿ ಬೀಟ್ ಪೊಲೀಸರು ಕೂಡ ಅಲ್ಲಿಗೆ ಬಂದಿದ್ದರು. ಅನುಮಾನಗೊಂಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೌಕತ್ ಅಲಿ ಅವರು ಅಲ್ಲಿದ್ದ ಒಬ್ಬನನ್ನು ಉಪ್ಪಿನಂಗಡಿ ಪೊಲೀಸರಿಗೆ ಹಸ್ತಾಂತರಿಸಿದರು.

ಹಿರೇಬಂಡಾಡಿಯ ಹಲವು ಕಡೆ ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಮನೆಗಳಿಂದ ಅಡಿಕೆ ಕಳ್ಳತನ ಆಗುತ್ತಿತ್ತು. ಗ್ರಾಮಸ್ಥರು ಕಳ್ಳತನದ ವಿಷಯವನ್ನು ಪೊಲೀಸರಿಗೆ ಮೌಖಿಕವಾಗಿ ತಿಳಿಸಿದ್ದರೂ ಅದಕ್ಕೆ ದೊಡ್ಡ ಪ್ರಚಾರವನ್ನು ಅವರು ಕೊಟ್ಟಿರಲಿಲ್ಲ. ಹೇಗಾದರೂ ಮಾಡಿ ಕಳ್ಳರನ್ನು ಹಿಡಿಯಬೇಕೆಂದು ಗ್ರಾಮಸ್ಥರು ಹಲವು ಕಡೆ ರಾತ್ರಿ ಹೊತ್ತು ನಿಗಾ ಇಟ್ಟಿದ್ದರು. ಹೊಂಚುಹಾಕಿ ಕಾಯುತ್ತಿದ್ದರು.

ಈ ಅಡಿಕೆ ಕಳ್ಳತನದ ಪ್ರಕರಣವು ಹಲವು ಹೊಸ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ದಟ್ಟವಾಗಿದೆ.   ಅಡಿಕೆ ಕಳ್ಳತನದ ಜೊತೆಗೆ ಗಾಂಜಾ ದಂಧೆಯೂ ಇಲ್ಲಿ ಸಕ್ರಿಯವಾಗಿದೆ ಎಂಬ ಗುಮಾನಿ ಗ್ರಾಮದಲ್ಲಿ ಹರಡಿದೆ.

ಅಡಿಕೆ ಕಳ್ಳತನದ ತಂಡವು ಕಳೆದ ಒಂದು ತಿಂಗಳಿನಿಂದ ಹಿರೇಬಂಡಾಡಿ ಯಲ್ಲಿ ಸಕ್ರಿಯವಾಗಿ ಇದ್ದುದಂತೂ ಸತ್ಯ. ವಾರಗಳ ಹಿಂದೆ, ರಾತ್ರಿ ಸುಮಾರು ಮೂರು ಗಂಟೆಯ ಸಮಯಕ್ಕೆ ಗಣೇಶ್ ಮಠಂದೂರು ಅವರ ಅಂಗಳದಿಂದ ಒಂದಷ್ಟು ಅಡಿಕೆ ಗೋಣಿಯಲ್ಲಿ ತುಂಬಿಸಿದ್ದರು. ಕಟ್ಟಿಹಾಕಿದ್ದ ನಾಯಿಗಳು ಹಾರಿಹಾರಿ ಬೊಗಳುವ ಸದ್ದಿಗೆ ಅವರ ಮನೆಯವರು ಲೈಟ್ ಹಾಕಿದಾಗ ಕಳ್ಳರು ಪರಾರಿಯಾಗಿದ್ದರು.

ನಿನ್ನೆ ತಾನೇ ನೆಹರೂ ತೋಟದ ವಿಜಯಭಾನು ಅವರ ಮನೆಯಿಂದ 6 ಚೀಲ ಅಡಿಕೆ ಕಳವು ಆಗಿತ್ತು. ವಾರದ ಹಿಂದೆ ಮೊರತ್ತ ಮೇಲು ಅಂಗಡಿ ಹಮೀದ್ ಅವರ ಮನೆಯಿಂದ ಅಡಿಕೆ ಕಳ್ಳತನ ನಡೆದಿತ್ತು. ತಿಂಗಳ ಹಿಂದೆ ಪಾಳೆತ್ತಡಿ ಹಸೈನಾರ್ ಅವರ ಮನೆಯಲ್ಲಿ ಅಡಿಕೆ ಹೋಗಿತ್ತು.

ಈಗ ಊರಿನವರ ಮುಂದೆ ಎರಡು ಸಮಸ್ಯೆಗಳು ಕಂಡುಬರುತ್ತಿವೆ. ಒಂದು ಕದ್ದುಕೊಂಡು ಹೋಗುವುದು ; ಇನ್ನೊಂದು ಕದ್ದು ಮಾರುವುದು. ಒಂದು ಅಡಿಕೆಯಾದರೆ; ಮತ್ತೊಂದು ಗಾಂಜಾ.

Leave A Reply

Your email address will not be published.