ಎದೆನೋವು ಕಾಣಿಸಿಕೊಂಡ ಮಹಿಳೆಯ ಆಸ್ಪತ್ರೆಗೆ ಸೇರಿಸಿದ ಮಹೇಶ್ ಬಸ್ ಸಿಬಂದಿ

ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅನಾರೋಗ್ಯಕ್ಕೀಡಾದ ಮಹಿಳೆಗೆ ಕಾಳಜಿ ತೋರಿ ಆಕೆಯ ನೆರವಿಗೆ ನಿಂತು ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಮಾನವೀಯತೆ ಮೆರೆದಿದ್ದಾರೆ.
ತಲಪಾಡಿ ಕಿನ್ಯಾದಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿ ಮಹಿಳೆಯೊಬ್ಬರಿಗೆ ಎದೆ ನೋವು ಕಾಣಿಸಿಕೊಂಡ ತಕ್ಷಣ ಬಸ್ ಚಾಲಕರು ಜಾಗೃತರಾಗಿದ್ದಾರೆ.
ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕರು ಬಸ್ಸನ್ನು ಯಾವುದೇ ನಿಲ್ದಾಣಗಳಲ್ಲಿ ನಿಲ್ಲಿಸದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ತಂದು ಮಹಿಳೆಗೆ ಜೀವದಾನ ನೀಡಿದ್ದಾರೆ.
ಚಾಲಕ ಪ್ರಮೋದ್ ಹಾಗೂ ನಿರ್ವಾಹಕ ಅಶ್ವಿತ್ ಮಹಿಳೆಗೆ ಕಾಳಜಿ ತೋರಿದವರು. ಕರಾವಳಿ ಶ್ರಮಿಕ ಸಂಘ ಖಾಸಗಿ ಬಸ್ ಚಾಲಕರ ಹಾಗೂ ನಿರ್ವಾಹಕರ ಸಂಘದ ಸದಸ್ಯರಾಗಿರುವ ಹಾಗೂ ಮಹೇಶ್ ಬಸ್ಸಿನ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ ಪ್ರಮೋದ್ ಹಾಗೂ ನಿರ್ವಾಹಕ ಅಶ್ವಿತ್ ಇವರ ಮಾನವೀಯತೆಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.