Home News ಸದ್ಯಕ್ಕಿಲ್ಲ ಲಾಕ್ ಡೌನ್ ನಂತಹ ಕಠಿಣ ಕ್ರಮ,ಇನ್ನೆರಡು ವಾರ ಈಗಿನ ನಿಯಮಗಳೇ ಜಾರಿ | ತಾಂತ್ರಿಕ...

ಸದ್ಯಕ್ಕಿಲ್ಲ ಲಾಕ್ ಡೌನ್ ನಂತಹ ಕಠಿಣ ಕ್ರಮ,ಇನ್ನೆರಡು ವಾರ ಈಗಿನ ನಿಯಮಗಳೇ ಜಾರಿ | ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಬೊಮ್ಮಾಯಿ, ಆರಂಭವಾಗಲಿದೆಯೇ ಶಾಲಾ ಕಾಲೇಜು?

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕದಲ್ಲಿ ಸದ್ಯ ಮಹಾಮಾರಿಯ ತಡೆಗಟ್ಟುವಲ್ಲಿ ಸರ್ಕಾರ ಉನ್ನತ ಪ್ರಯತ್ನದಲ್ಲಿದ್ದು,ಇಂದು ಮುಖ್ಯ ಮಂತ್ರಿ ಬೊಮ್ಮಾಯಿ ತುರ್ತು ಸಲಹಾ ಸಮಿಯ ಸಭೆ ನಡೆಸಿದರು.ಕರ್ನಾಟಕದಲ್ಲಿ ಕೊರೋನ ಮೂರನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪೊಲೀಸ್ ಹಿರಿಯ ಅಧಿಕಾರಿಗಳ ಸಹಿತ ಟಾಸ್ಕ್ ಫೋರ್ಸ್ ನ ಸದಸ್ಯರು ಉಪಸ್ಥಿತರಿದ್ದರು.

ಇಂದು ನಡೆದ ಮಹತ್ತರವಾದ ಸಭೆಯಲ್ಲಿ ಶಾಲಾ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ಶಾಲಾ-ಕಾಲೇಜು ಆರಂಭಕ್ಕೆ ಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈಗಲೇ ಶಾಲಾ-ಕಾಲೇಜು ಓಪನ್ ಮಾಡಬೇಕೆಂದು ಕೆಲವರು ಅಭಿಪ್ರಾಯ ಪಟ್ಟರೆ,ಸೆಪ್ಟೆಂಬರ್‌ವರೆಗೆ ಕಾದು ನೋಡುವಂತೆ ಇನ್ನು ಕೆಲವರು ಸಲಹೆ ನೀಡಿದ್ದಾರೆ. ಟ್ರೇಸ್, ಟ್ರ್ಯಾಕ್ ಹಾಗೂ ಟ್ರೀಟ್ ಸೂತ್ರವನ್ನು ಹೆಚ್ಚಾಗಿ ಅನುಸರಿಸುವಂತೆ ಪರಿಣತರು ಮುಖ್ಯಮಂತ್ರಿಗೆ ಸಲಹೆ ನೀಡಿದ್ದಾರೆ.

ಕೇರಳ ಮತ್ತು ಮಹಾರಾಷ್ಟ್ರಕ್ಕೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿಲ್ಲ. ಹಾಗೆಂದು ನಾವು ಮೈಮರೆಯುವುದು ಬೇಡ. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಹೆಚ್ಚು ವ್ಯಾಕ್ಸಿನೇಷನ್ ಆಗಬೇಕು. ಅಗತ್ಯ ಬಿಗಿ ಕ್ರಮಗಳು ಅನಿವಾರ್ಯ. ಧಾರ್ಮಿಕ ಹಬ್ಬ ಹರಿದಿನಗಳು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಅದ್ಧೂರಿ ಸಮಾರಂಭಕ್ಕೆ ಬ್ರೇಕ್ ಹಾಕಬೇಕು. ಚಾಚೂ ತಪ್ಪದೇ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಕ್ರಮಜರುಗಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಸಭೆಯಲ್ಲಿ ಮುಖ್ಯಮಂತ್ರಿ ಜಿಲ್ಲಾವಾರು ಕೋವಿಡ್ ಅಂಕಿ-ಅಂಶಗಳ ಮಾಹಿತಿ ಪಡೆದರು. ಇತರ ರಾಜ್ಯಗಳಿಂದ ಆಗಮಿಸುವವರಿಗೆ ಕಡ್ಡಾಯ ಕೋವಿಡ್ ಟೆಸ್ಟ್ ಮಾಡಬೇಕು. ಹೆಚ್ಚು ಪಾಸಿಟಿವಿಟಿ ದರವಿರುವ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ಆಟೋ, ಓಲಾ, ಊಬರ್, ಹೊಟೆಲ್‌ಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ದಿನಗೂಲಿ ಕೆಲಸ ಅವಲಂಬಿತರಿಗೆ ಯಾವುದೇ ತೊಂದರೆಯಾಗಬಾರದು ಎಂದು ಸೂಚನೆ ನೀಡಿದರು.

ಸದ್ಯಕ್ಕೆ ಲಾಕ್ ಡೌನ್‌ನಂಥ ಕಠಿಣ ಕ್ರಮ ಬೇಡ, ಅಗತ್ಯಬಿದ್ದರೆ ವೀಕೆಂಡ್ ಕರ್ಪ್ಯೂ ಮಾಡೋಣ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಎರಡು ವಾರಗಳ ಈಗಿರುವ ನಿಯಮಗಳನ್ನೇ ಮುಂದುವರಿಸಲು ಮುಖ್ಯಮಂತ್ರಿ ಸೂಚನೆ ನೀಡಿದರು. ಹೊಸದಾಗಿ ಯಾವುದೇ ನಿಯಮಗಳು ಜಾರಿಯಾಗುವುದಿಲ್ಲ. ಈಗ ಜಾರಿಯಲ್ಲಿರುವ ನಿಯಮಗಳನ್ನೇ ಸರಿಯಾಗಿ ಪಾಲಿಸುವಂತೆ ಸೂಚಿಸಲಾಯಿತು.

ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಸಚಿವರಾದ ಡಾ. ಸಿಎನ್ ಅಶ್ವತ್ಥ ನಾರಾಯಣ, ಡಾ.ದೇವಿ ಪ್ರಸಾದ್ ಶೆಟ್ಟಿ, ಡಾ. ಎಂಕೆ ಸುದರ್ಶನ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.