ಪುತ್ತೂರು: ನಗರದಲ್ಲಿ ಮಂಗಳವಾರ ಅಪರಾಹ್ನ ವಿಮಾನವೊಂದು ಹಲವು ಬಾರಿ ಭೂಮಿ ಮಟ್ಟಕ್ಕೆ ಅತೀ ಸಮೀಪದಲ್ಲಿ ಹಾರಾಡುತ್ತಾ ಸುತ್ತಾಟ ನಡೆಸುತ್ತಿದ್ದ ದೃಶ್ಯ ಕಂಡು ಬಂದಿತ್ತು. ಇದು ಜನರಲ್ಲಿ ಆತಂಕ ಮೂಡಿಸಿತ್ತು. ಆದರೆ ನಂತರ ಇದೊಂದು ಭೂ ವಿಜ್ಞಾನಕ್ಕೆ ಸಂಬಂಧಿಸಿದ ಸಮೀಕ್ಷೆ ನಡೆಸುವ ಕೆಲಸ ನಡೆಸುತ್ತಿದೆ ಎನ್ನುವ ಮಾಹಿತಿ ತಿಳಿದು ಜನ ನಿರುಮ್ಮಳವಾದರು.

ಪುತ್ತೂರು ನಗರದ ಸುತ್ತಮುತ್ತ ಮೇಲ್ಭಾಗದಲ್ಲಿ ನೆಲ ಮಟ್ಟಕ್ಕೆ ಅತಿ ಸಮೀಪದಲ್ಲಿ ವಿಮಾನ ಹಾರಾಡುತ್ತಿದ್ದು, ಸುಮಾರು 10 ರಿಂದ 15 ಸುತ್ತು ಹಾರಾಟ ನಡೆಸಿದೆ. ಯಾಕೆ ಹಾರಾಟ ನಡೆಸಿದ್ದು ಎನ್ನುವ ಮಾಹಿತಿ ಲಭ್ಯವಾಗಿರಲಿಲ್ಲ. ಕೊನೆಗೂ ಇದು ಭೂಮಿಯ ರಚನೆ, ಅಧ್ಯಯನಕ್ಕೆ ಸಂಬಂಧಪಟ್ಟ ನಡೆ ಸರ್ವೆಯಾಗಿದೆ ಎಂಬ ಮಾಹಿತಿ ಲಭಿಸಿದೆ.
ಈ ವಿಮಾನ ಭೂ ಭೌತಿಕ ಸಮೀಕ್ಷೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಮೀಕ್ಷೆ ಮಾಡುತ್ತಿದ್ದು, ವಿಮಾನವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಮಾಡಿತ್ತು. ಖನಿಜ ಸಂಪತ್ತು, ಭೂಗರ್ಭ ಜಲಸಂಪನ್ಮೂಲ ಚುಂಬ ಕ್ಷೇತ್ರದ ಬದಲಾವಣೆಗಳ ಕುರಿತು ಮಾಹಿತಿ ಸಂಗ್ರಹ ಮಾಡಲಿದೆ. ಇದು ಕ್ಯಾಲಿಬರ್ ಏರ್ ಬೋನ್ ಜಿಯೋ ಫಿಸಿಕ್ಸ್ (ಭೂಮಿಯ ಅಡಿಭಾಗವನ್ನು ಗಾಳಿಯಿಂದ ಮ್ಯಾಪಿಂಗ್ ಮಾಡುವ ಕಂಪನಿ) ಸೇರಿದ ವಿಮಾನ ಎಂದು ತಿಳಿದು ಬಂದಿದೆ.
ಪೊಲೀಸ್ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಿದೆ. ಇದು ಸೆಸ್ನಾ ವಿಮಾನವಾಗಿದ್ದು, ಸಮೀಕ್ಷೆ ಮಾಡುತ್ತಿದೆ. ಕರ್ನಾಟಕದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಅಪರೂಪದ ಮಣ್ಣಿನ ಲೋಹಗಳ ಸಮೀಕ್ಷೆ ಎರಡು ತಿಂಗಳ ಕಾಲ ನಡೆಯುವ ನಿರೀಕ್ಷೆ ಇರುವುದಾಗಿ ತಿಳಿಸಿದೆ.

