ಭಟ್ಕಳ: ಆರ್ಎಸ್ಎಸ್ ಕುರಿತು ಕೆಲವರು ಇಲ್ಲಸಲ್ಲದ್ದನ್ನು ಹೇಳುತ್ತಾರೆ. ಆದರೆ ಆರ್ಎಸ್ಎಸ್ ಕಳೆದ 100ವರ್ಷಗಳಲ್ಲಿ ಹೆಮ್ಮರವಾಗಿ ಬೆಳೆದಿದೆ. ಆರ್ಎಸ್ಎಸ್ ಅನ್ನು ನಿಷೇಧ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ರಾಷ್ಟ್ರಾಭಿಮಾನದ ಚಟುವಟಿಕೆ ತಡೆಯಲು ಕೂಡಾ ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಪಟ್ಟಣದ ಹಳೇ ತಹಸೀಲ್ದಾರ್ ಕಚೇರಿ ಹಿಂಬದಿಗಿರುವ ಮೈದಾನದಲ್ಲಿ ನಗರ ಹಿಂದೂ ಸಮ್ಮೇಳನ ಸಮಿತಿ ಭಾನುವಾರ ಏರ್ಪಡಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡುತ್ತಾ ಅವರು ಈ ಮಾತನ್ನು ಹೇಳಿದರು.
” ನಾವು ದುರ್ಬರಲ್ಲ. ನಾವು ದುರ್ಬಲರಾದಾಗ ಮಾತ್ರ ನಮ್ಮನ್ನು ತಡೆಯಲು ನಿಮಗೆ ಸಾಧ್ಯ. ಹಿಂದೂ ಸಮಾಜ ಒಟ್ಟಾಗಬೇಕು ಎನ್ನುವುದು ಕೋಟ್ಯಂತರ ಜನರ ಆಸೆ. ಹಿಂದೂ ಆಚರಣೆ, ಸಂಸ್ಕೃತಿಯನ್ನು ಜಗತ್ತು ಒಪ್ಪುತ್ತದೆ. ನಮ್ಮ ಯೋಗಾಚರಣೆ ಜಗತ್ತೇ ಮಾಡುತ್ತಿದೆ. ಹಿಂದುತ್ವದ ಕಿಚ್ಚು ಎದ್ದಿದೆ. ಆದರೆ ಜಗತ್ತು ನಮ್ಮನ್ನು ದುರ್ಬಲಗೊಳಿಸಲು ಹುನ್ನಾರ ಮಾಡುತ್ತಿದೆ” ಎಂದು ಹೇಳಿದರು.
ನಮ್ಮ ದೇಶದ ರಕ್ತ ಜಗತ್ತನ್ನೇ ಗೆದ್ದಿದೆ. ಜಗತ್ತಿನ ದುರಹಂಕಾರ ಗೆದ್ದಿದೆ. ಜಗತ್ತನ್ನು ಮೆಟ್ಟಿನಿಂತವರು ನಾವು. ಜಗತ್ತಿಗೆ ಎಲ್ಲವನ್ನೂ ಕೊಟ್ಟಿದ್ದು ಭಾರತ. ಆದರೆ ಸ್ವಾತಂತ್ರ್ಯ ನಂತರದಲ್ಲಿ ಆಗಿದ್ದು ಬೇರೆ. ಇತಿಹಾಸ ಏನೇ ಹೇಳಲಿ, ನಮ್ಮದು ಪರಮೋನ್ನತ ಸಂಸ್ಕೃತಿ ಎಂದು ಹೇಳಿದರು.

