

ಮಂಗಳೂರು: ಆನ್ಲೈನ್ ಮ್ಯಾಟ್ರಿಮೊನಿ ಮೂಲಕ ಮದುವೆಯ ಹೆಸರಲ್ಲಿ ಯುವತಿಯರನ್ನು ತನ್ನ ಬಲೆಗೆ ಬೀಳಿಸಿ ವಂಚಿಸುತ್ತಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧನ ಮಾಡಿದ್ದಾರೆ. ಮ್ಯಾಟ್ರಿಮೋನಿಯಲ್ಲಿ ವರ ಹುಡುಕುತ್ತಿದ್ದ ಯುವತಿಯರನ್ನು ಗುರಿಯಾಗಿಸಿ ಮದುವೆಯಾಗುವುದಾಗಿ ನಂಬಿಸಿ ಅವರಿಂದ ಲಕ್ಷಾಂತರ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತನನ್ನು ಸುಶಾಂತ್ ಪೂಜಾರಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಸುಶಾಂತ್ ಪೂಜಾರಿ ಮೊದಲು ಉಡುಪಿಯ ಯುವತಿಯನ್ನು 2021 ರಲ್ಲಿ ಮದುವೆಯಾಗಿದ್ದ. ನಂತರ ಮಹಾರಾಷ್ಟ್ರದ ಘನಸೋಳಿಯ ಯುವತಿಯನ್ನು 2025 ರ ಫೆ.2 ರಂದು ನವಿಮುಂಬೈನಲ್ಲಿ ಮದುವೆಯಾಗಿದ್ದ. ಆಕೆಯಿಂದ ಈತ ಹಂತ ಹಂತವಾಗಿ ರೂ.6.60 ಲಕ್ಷ ಪಡೆದು, ನಂತರ ನಾಪತ್ತೆಯಾಗಿದ್ದ. ಅನಂತರ ಯುವತಿಗೆ ಅನುಮಾನಗೊಂಡಿದ್ದು, ಈತನ ಪೂರ್ವಾಪರ ವಿಚಾರಿಸಿದಾಗ ಆಗಲೇ ಮದುವೆಯಾಗಿದ್ದು ಈತ ಅನೇಕ ಯುವತಿಯರಿಗೆ ವಂಚಿಸಿರುವುದು ಗೊತ್ತಾಗಿದೆ.
ಯುವತಿ ಕಾವೂರು ಠಾಣೆಗೆ ದೂರು ನೀಡಿದ್ದರು. ಆರೋಪಿ ವಿರುದ್ಧ ಬಿಎನ್ಎಸ್ ಸೆಕ್ಷನ್ 318 (4) (ವಂಚನೆ), 316 (1) ಮತ್ತು 316 (2) (ನಂಬಿಕೆದ್ರೋಹ), 336 (3) (ಪೋರ್ಜರಿ ನಡೆಸಿ ವಂಚನೆ), 340 (1) ರ (ನಕಲಿ ದಾಖಲೆ ನೀಡಿ ವಂಚನೆ) ಅಡಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಆರೋಪಿ 2021 ರಲ್ಲಿ ಉಡುಪಿ ಯುವತಿ ಜೊತೆ ಮದುವೆಯಾಗಿದ್ದು, ಉಡುಪಿ, ಮುಂಬೈ, ಬೆಂಗಳೂರಿನ ತಲಾ ಇಬ್ಬರು ಯುವತಿಯರು, ಕಾರ್ಕಳದ ಒಬ್ಬ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದು, ಕೆಲವರಿಂದ ಹಣವನ್ನೂ ಪಡೆದುಕೊಂಡಿದ್ದ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಮಂಗಳೂರು ಉರ್ವ ಠಾಣೆಯಲ್ಲಿ 2017 ರಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣ, ಉಡುಪಿ ಜಿಲ್ಲೆಯ ಕೋಟ ಠಾಣೆಯಲ್ಲಿ 2022 ರಲ್ಲಿ ದಾಖಲಾಗಿದ್ದ ಕಳವು ಪ್ರಕರಣ, ಮಹಾರಾಷ್ಟ್ರದ ಅರ್ನಾಲ್ ಠಾಣೆಯಲ್ಲಿ 2022 ರಲ್ಲಿ ದಾಖಲಾಗಿದ್ದ ಮಾನವ ಕಳ್ಳ ಸಾಗಣೆ, ಅಕ್ರಮ ಬಂಧನ ಮತ್ತು ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣಗಳಲ್ಲೂ ಸುಶಾಂತ್ ಪೂಜಾರಿ ಆರೋಪಿಯಾಗಿದ್ದ. ಆತ ಐಟಿಐವರೆಗೆ ಓದಿರುವುದಾಗಿ ಮಾಹಿತಿ ನೀಡಿದ್ದಾರೆ.
ಈತ ನವಿ ಮುಂಬೈನ ಯವತಿಯನ್ನು ಮದುವೆಯಾಗಲು ನೆರವಾಗಿದ್ದ, ಸುಶಾಂತ್ ತನ್ನ ಅಳಿಯ ಎಂದು ಹೇಳಿ ಮುಂಬೈನಲ್ಲಿ ನಡೆದಿದ್ದ ಮದುವೆಯಲ್ಲಿ ಭಾಗಿಯಾಗಿದ್ದ ಮುಲ್ಕಿಯ ಕಾರು ಚಾಲಕ ಭಾಸ್ಕರ್ ಎನ್ನುವಾತನನ್ನು ಬಂಧನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.













