

ಪುತ್ತೂರು: ವಿವಾಹ ಭರವಸೆ ನೀಡಿ ಯುವತಿಗೆ ವಂಚನೆ ಮಾಡಿದ ಆರೋಪ ಹೊತ್ತಿರುವ ಮಗನಿಗೆ ಆಶ್ರಯ ನೀಡಿದ ಆರೋಪದಲ್ಲಿ ತಂದೆಗೆ ಹೈಕೋರ್ಟ್ನಲ್ಲಿ ಸಮಾಧಾನಕರ ಸುದ್ದಿ ದೊರಕಿದೆ. ತಂದೆ ಪಿ ಜಿ ಜಗನ್ನಿವಾಸ ರಾವ್ ವಿರುದ್ಧದ ಕಾನೂನು ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಶ್ರೀಕೃಷ್ಣ ಜೆ ರಾವ್ ಎನ್ನುವಾತ ತನ್ನ್ನು ಮದುವೆಯಾಗುವದಾಗಿ ನಂಬಿಸಿ ವಂಚನೆ ಮಾಡಿದ ಆರೋಪದಲ್ಲಿ ಯುವತಿಯೋರ್ವಳು ಕಳೆದ ಜೂನ್ನಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದರು. ಈ ವೇಳೆ ಆರೋಪಿ ಶ್ರೀಕೃಷ್ಣ ತಲೆಮರೆಸಿಕೊಂಡಿದ್ದು, ತಂದೆ ಮಗನಿಗೆ ಆಶ್ರಯ ನೀಡಿದ್ದಾರೆ ಎನ್ನುವ ಕಾರಣಕ್ಕೆ ಪಿ ಜಿ ಜಗನ್ನಿವಾಸ ರಾವ್ ಸೇರಿ ಮೂವರ ಮೇಲೆ ಪೊಲೀಸರು ಬಿಎನ್ಎಸ್ ಸೆಕ್ಷನ್ 249 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ನನ್ನ ಮೇಲೆ ವಿನಾಕಾರಣ ಪ್ರಕರಣ ದಾಖಲು ಮಾಡಲಾಗಿದ್ದು ಇದನ್ನು ರದ್ದು ಮಾಡಬೇಕು ಎಂದು ಜಗನ್ನಿವಾಸರಾವ್ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯವು ಮಹತ್ವದ ಆದೇಶವನ್ನು ನೀಡಿದೆ. ಯಾವುದೇ ಭದ್ರವಾದ ಅಥವಾ ಸ್ಪಷ್ಟವಾದ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ತಂದೆ ಎನ್ನುವ ಕಾರಣಕ್ಕೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸರಿಯಲ್ಲ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದ್ದು, ಮುಂದಿನ ವಿಚಾರಣೆಯವರೆಗೆ ತನಿಖೆಗೆ ಬ್ರೇಕ್ ನೀಡಿದೆ.
ಪಿ ಪಿ ಹೆಗ್ಡೆ ಹಿರಿಯ ವಕೀಲರು ಆರೋಪಿ ಜಗನ್ನಿವಾಸ ರಾವ್ ಪರವಾಗಿ ವಾದ ಮಂಡನೆ ಮಾಡಿದ್ದರು. ಮಗನ ಮೇಲಿನ ಪ್ರಕರಣದ ವಿಚಾರ ನಡೆಯಲಿದೆ. ಆದರೆ ತಂದೆ ಮೇಲಿನ ಪ್ರಕರಣಕ್ಕೆ ಸದ್ಯಕ್ಕೆ ತಡೆ ಸಿಕ್ಕಿದಂತಾಗಿದೆ.













