

Viral News: ಹಳ್ಳಿಗಳಲ್ಲಿ ಬೆಳೆದ ಬೆಳೆಗಳನ್ನು ತಿನ್ನಲು ಪ್ರಾಣಿಗಳು ಬರುತ್ತವೆ. ರೈತರು ಈ ಸಮಸ್ಯೆಯಿಂದ ಬೇಸತ್ತು ನಾನಾ ಉಪಾಯ ಹೂಡುತ್ತಾರೆ. ಆದರೆ, ಇಲ್ಲೊಬ್ಬ ಯುವಕ ಬೆಳೆಗಳ ರಕ್ಷಣೆಗೆ ಕರಡಿ ವೇಷ ಧರಿಸಿ ಹೊಲದಲ್ಲಿ ಓಡಾಡಿದ ಘಟನೆ ಬೆಳಕಿಗೆ ಬಂದಿದೆ (Viral News). ರೈತನ ಜಾಣ್ಮೆಗೆ ನೆಟ್ಟಿಗರು ಭೇಷ್ ಎಂದಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯ ಜಹಾನ್ ನಗರದಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ. ಬೆಳೆದ ಬೆಳೆಗಳನ್ನು ಮಂಗಗಳು ಹಾನಿ ಮಾಡುತ್ತಿವೆ. ಮಂಗಗಳ ಉಪಟಳದಿಂರ ರೈತರು ಕಂಗೆಟ್ಟು ಹೋಗಿದ್ದಾರೆ. ಹೇಗಾದರೂ ಬೆಳೆ ರಕ್ಷಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ರೈತನೊಬ್ಬ ಕರಡಿಯ ವೇಷ ಧರಿಸಿ ಬೆಳೆ ರಕ್ಷಣೆ ಮಾಡಿದ ಘಟನೆ ಇದೀಗ ವೈರಲ್ ಆಗಿದೆ.
ಸುಮಾರು 40 , 45 ಮಂಗಗಳು ಹೊಲಗಳಿಗೆ ದಾಳಿ ಮಾಡಿ, ಬೆಳೆ ಹಾನಿ ಮಾಡುತ್ತವೆ. ಮಂಗಗಳು ಬೆಳೆ ಹಾನಿ ಮಾಡುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರಿಂದಲೂ ಪರಿಹಾರ ಸಿಕ್ಕಿರಲಿಲ್ಲ. ಹಾಗಾಗಿ ರೈತರು 4000ರೂ ಖರ್ಚು ಮಾಡಿ ಕರಡಿ ವೇಷ ಧರಿಸಿ, ಮಂಗಗಳನ್ನು ಓಡಿಸುತ್ತಿದ್ದರು ಎಂಬುದಾಗಿ ಟ್ವಿಟರ್ ನಲ್ಲಿ ಬರೆದು ಪೋಸ್ಟ್ ಮಾಡಲಾಗಿದೆ.
ಪೋಸ್ಟ್ ನೋಡಿದ ನೆಟ್ಟಿಗರು ಯುವಕನ ಜಾಣ್ಮೆಗೆ ನೆಟ್ಟಿಗರು ಭೇಷ್ ಎಂದಿದ್ದಾರೆ. ʼಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರಗಳನ್ನು ಕಂಡು ಹಿಡಿಯಬೇಕುʼ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಪಶ್ಚಿಮ ಯುಪಿಯಲ್ಲಿ ಪರಿಸ್ಥಿತಿ ನಿಜಕ್ಕೂ ಹೀಗೆಯೇ ಇದೆʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನು ಈ ವಿಚಾರ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಥಳೀಯ ಡಿಎಫ್ಒ ಸಂಜಯ್ ಬಿಸ್ವಾಲ್ ಮಂಗಗಳು ಬೆಳೆ ಹಾನಿ ಮಾಡದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ.













