ವಿಜಯನಗರ: ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿರುವ ಆಘಾತಕಾರಿ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ನಡೆದಿದೆ. ಮಕ್ಕಳ ಕೈಯಲ್ಲಿ ಈ ಕೆಲಸ ಮಾಡಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಉಮೇಶ್ ವಿರುದ್ಧ ಈ ಆರೋಪ ಕೇಳಿ ಬಂದಿದೆ.

ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಉಮೇಶ್ ಅವರು ಮಕ್ಕಳಿಗೆ ಬಾಳೆ ಹಣ್ಣಿನ ಆಸೆಯನ್ನು ತೋರಿಸಿ, ಶೌಚಾಲಯವನ್ನು ಸ್ವಚ್ಛ ಮಾಡಿಸಿದ್ದಾರೆ. ಇದನ್ನು ನೋಡಿದ ಸ್ಥಳೀಯ ಯುವಕರು ಮತ್ತು ಸಾರ್ವಜನಿಕರು ಶಿಕ್ಷಕನನ್ನು ಪ್ರಶ್ನೆ ಮಾಡಿದಾಗ, ಶಿಕ್ಷಕ ಉಮೇಶ್ ಉದ್ಧಟತನ ಮೆರೆದಿದ್ದಾರೆ. ʼನನ್ನನ್ನು ಪ್ರಶ್ನಿಸಲು ನೀವ್ಯಾರು?ʼ ನಿಮ್ಮ ಮೇಲೆ ಪೊಲೀಸ್ ಕೇಸ್ ಹಾಕಿ ಜೈಲಿ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಗ್ರಾಮಸ್ಥರು ಮತ್ತುಷ್ಟು ಕಿಡಿಕಾರಿದ್ದಾರೆ.
ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಶಾಲೆಯ ಮುಂಭಾಗದಲ್ಲಿ ಜಮಾಯಿಸಿ, ಪ್ರತಿಭಟನೆ ಮಾಡಿದ್ದಾರೆ. ಕೂಡಲೇ ಮುಖ್ಯ ಶಿಕ್ಷಕ ಉಮೇಶ್ ನನ್ನು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು.
ಈ ಕುರಿತು ಗ್ರಾಮಸ್ಥರು ಹಗರಿಬೊಮ್ಮನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಅಧಿಕೃತ ದೂರನ್ನು ನೀಡಿದ್ದಾರೆ. ಸದ್ಯ ಬಿಇಓ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುವ ಭರವಸೆ ನೀಡಿದ್ದು, ಮುಂದಿನ ಕ್ರಮ ಏನು ತಗೋಳ್ಳುತ್ತಾರೆ ಎನ್ನುವುದರ ಮೇಲೆ ಗ್ರಾಮಸ್ಥರು ಕಾದಿದ್ದಾರೆ.

