Tamilunadu : ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಡಿಎಂಕೆ, ಎಐಎಡಿಎಂಕೆ ಪಕ್ಷಗಳ ನಡುವೆ ಇದೀಗ ತಮಿಳು ನಟ ವಿಜಯ್ ಟಿವಿಕೆ ಪಕ್ಷ ಕಣಕ್ಕಿಳಿದಿದ್ದು, ಸ್ವಂತ ಪ್ರಾದೇಶಿಕ ಪಕ್ಷ ಕಟ್ಟಿ ಜನಸೇವೆಗೆ ಮುಂದಾಗಿದ್ದಾರೆ. ಹೀಗಾಗಿ ತಮಿಳುನಾಡಲ್ಲಿ ಈ ಭಾರೀ ದೊಡ್ಡ ಪೈಪೋಟಿ ನಡೆಯಲಿದೆ. ಬಿಜೆಪಿಯ ಮಿತ್ರಪಕ್ಷ ಅಣ್ಣಾಡಿಎಂಕೆ, ಮಂಗಳವಾರ 297 ಭರವಸೆಗಳನ್ನು ಹೊಂದಿರುವ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಭರ್ಜರಿ ಉಚಿತ ಭರವಸೆಗಳನ್ನು ನೀಡಿದೆ.

ಅಣ್ಣಾಡಿಎಂಕೆ ಪಾರ್ಟಿಯು ಕರ್ನಾಟಕದ ಗೃಹ ಲಕ್ಷ್ಮಿಯಂತೆ ಮಹಿಳೆಯರಿಗೆ ಮಾಸಿಕ 2,000 ರು. ಸಹಾಯಧನ ಘೋಷಿಸಿರುವುದು ಗಮನ ಸೆಳೆಯುವಂತಿದೆ. ಅಲ್ಲದೆ, ಮಹಿಳೆಯರಂತೆ ಪುರುಷರಿಗೂ ಉಚಿತ ಬಸ್ ಯಾನ ಪ್ರಕಟಿಸಲಾಗಿದೆ. ಜೊತೆಗೆ ಬಡವರ ಮನೆಗೆ ಉಚಿತ ಫ್ರಿಜ್ಡ್ ನೀಡುವುದಾಗಿ, ಬೆಲೆಯೇರಿಕೆ ಮತ್ತು ತೆರಿಗೆ ಹೊರೆಯಿಂದ ಮುಕ್ತಿಗೆ ಪ್ರತಿ ಪರಿವಾರಕ್ಕೂ 10,000 ರು. ವಿಶೇಷ ನೆರವು ಘೋಷಿಸಿದೆ.
ಇದರೊಂದಿಗೆ, ಪ್ರತಿ ಮನೆಗೆ ವರ್ಷಕ್ಕೆ 3 ಉಚಿತ ಸಿಲಿಂಡರ್, ಜಲ್ಲಿಕಟ್ಟು ಎಮ್ಮೆಗಳನ್ನು ಪಳಗಿಸುವವರು ಮೃತರಾದರೆ ಅವರ ಪರಿವಾರಕ್ಕೆ 10 ಲಕ್ಷ ರು. ನೆರವು ಮತ್ತು ವೃದ್ಧರ ಪಿಂಚಣಿ ಹೆಚ್ಚಳದ ಭರವಸೆಯನ್ನೂ ನೀಡಲಾಗಿದೆ. ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಸುಮಾರು 297 ಘೋಷಣೆಗಳಿವೆ ಮತ್ತು ಕೊನೆಯದಾಗಿ, ‘ಸೇನೆಯಲ್ಲಿ ಹುತಾತ್ಮರಾದ ಮತ್ತು ಅಂಗವಿಕಲರಾದ ಸೈನಿಕರ ಕುಟುಂಬ ಸದಸ್ಯರಿಗೆ ಅನುಕಂಪದ ನೌಕರಿ ನೀಡಲಾಗುವುದು. ಎಂದು ತಿಳಿಸಲಾಗಿದೆ. ಬೇರೆಡೆ ನೌಕರಿಯಲ್ಲಿರುವ 5 ಲಕ್ಷ ಮಹಿಳೆಯರಿಗೆ ‘ಅಮ್ಮ’ ಯೋಜನೆಯಡಿ 25,000 ರು. ಸಬ್ಸಿಡಿ ಅಡಿಯಲ್ಲಿ ದ್ವಿಚಕ್ರ ವಾಹನ ನೀಡುವುದಾಗಿ ತಿಳಿಸಿದೆ.
