

ರಾಜಕಾರಣಿಗಳು ಚುನಾವಣೆ ಸಂದರ್ಭ ಮತದಾರರ ಸೆಳೆಯಲು ಹೊಸ ಹೊಸ ಕಸರತ್ತು ಮಾಡುವುದು ಹೊಸದೇನಲ್ಲ. ಇತ್ತ ಬಿಜೆಪಿ ಮಾಜಿ ಶಾಸಕ ಕಂಬಳಿ ಹಂಚುವ ಕೆಲಸ ಆಯೋಜನೆ ಮಾಡಿದ್ದಾರೆ. ನಿರ್ಗತಿಕರಿಗೆ, ಸಾರ್ವಜನಿಕ ಪ್ರದೇಶದಲ್ಲಿ ಕೊರೆವ ಚಳಿಯಲ್ಲಿ ಮಲಗುವ ಹಲವರಿಗೆ ಮಾಜಿ ಶಾಸಕ ಹೊದಿಕೆ ಹಂಚಿದ್ದಾರೆ. ಈ ವೇಳೆ ತಾನು ಹಂಚಿದ ಹೊದಿಕೆ ಮುಸ್ಲಿಮ್ ಮಹಿಳೆಗೆ ಹೋಗಿದೆ ಎಂದು ಗೊತ್ತಾಗುತ್ತಿದ್ದಂತೆ ಕೂಡಲೇ ವಾಪಸ್ ಪಡೆದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಪ್ರತಿದಿನ ಮೋದಿಗೆ ಬೈಯುವವರು ಹೊದಿಕೆ ಪಡೆಯಲು ಅರ್ಹರಲ್ಲ ಎಂದು ಅವರು ಹೇಳಿದ್ದಾರೆ.
ರಾಜಸ್ಥಾನದ ಬಿಜೆಪಿ ಮಾಜಿ ಶಾಸಕ ಸುಕ್ಬೀರ್ ಸಿಂಗ್ ಜೌನಪುರಿಯಾ ಈ ರೀತಿ ಮಾಡಿ ವಿವಾದದ ಸುಳಿಗೆ ಸಿಲುಕಿದ್ದಾರೆ. ಸುಕ್ಬೀರ್ ಸಿಂಗ್ ತನ್ನ ಕ್ಷೇತ್ರದಲ್ಲಿ ಈ ರೀತಿ ಮಾಡಲು ಹೋಗಿ ವಿವಾದಕ್ಕೆ ಗುರಿಯಾಗಿದ್ದಾರೆ.
ಉಚಿತವಾಗಿ ಹೊದಿಕೆ ಹಂಚುತ್ತಾ ಬರುವಾಗ ಅನುಮಾನಗೊಂಡ ಸುಕ್ಬೀರ್ ಸಿಂಗ್ ಹೊದಿಕೆ ಹಂಚಿದ ಮಹಿಳೆಯ ಹೆಸರು ಹೇಳುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಸುಕರನ್ ಖಾನ್ ಅನ್ನೋ ಮಹಿಳೆ ತನ್ನ ಹೆಸರು ಹೇಳಿದ್ದಾರೆ. ಹೆಸರು ಕೇಳುತ್ತಿದ್ದಂತೆ ಸುಕ್ಬೀರ್ ಸಿಂಗ್ ಕೆರಳಿದ್ದು, ಪ್ರಧಾನಿ ಮೋದಿ ಬಯ್ಯುವವರು ನಾನು ಕೊಡುವ ಹೊದಿಕೆ ಪಡೆಯಲು ಅರ್ಹರಲ್ಲ. ನಿಮಗೆ ಬೇಜಾರಾದರೂ ನನಗೆ ಏನೂ ಮಾಡಲು ಸಾಧ್ಯವಿಲ್ಲ. ಮೋದಿ ಯೋಜನೆ ವಿರೋಧಿಸುತ್ತೀರಿ, ಮೋದಿಗೆ ಬಯ್ಯುತ್ತೀರಿ. ಮೋದಿಗೆ ಬೈದು ಇದೀಗ ಹೊದಿಕೆ ಪಡೆಯಲು ಸಾಧ್ಯವಿಲ್ಲ ಎಂದು ಕ್ಯಾಮೆರಾ ಮುಂದೆ ಹೇಳಿದ್ದಾರೆ. ಇದು ಸರ್ಕಾರದ ಯೋಜನೆಯಲ್ಲ, ನಾನು ವೈಯುಕ್ತಿಕವಾಗಿ ನೀಡುತ್ತಿರುವ ಯೋಜನೆ. ನನ್ನ ಯೋಜನೆಯಲ್ಲಿ ಮೋದಿಗೆ ಬೈದು ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದು ತಮ್ಮ ಹೇಳಿಕೆಗೆ ಸಮರ್ಥನೆಯನ್ನೂ ನೀಡಿದ್ದಾರೆ.
ಈ ವೀಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ನಾಯಕರು ಸುಕ್ಬೀರ್ ವಿರುದ್ಧ ಮುಗಿ ಬಿದ್ದಿದ್ದಾರೆ.
