

Mukesh Ambani : ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರು ಕೂಡ ಭಾರತೀಯರಲ್ಲಿ ಚಿನ್ನ ಖರೀದಿಸುವ ಉತ್ಸಾಹ ಇನ್ನೂ ಕೂಡ ಹೋಗಿಲ್ಲ. ಚಿನ್ನದ ದರ ಏರಿಕೆ ಕಾಣುತ್ತಿರುವಂತೆಯೇ ಖರೀದಿದಾರರ ಸಂಖ್ಯೆಯು ಕೂಡ ಏರುತ್ತಲೇ ಇದೆ. ಈ ನಡುವೆ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಪ್ರಮುಖ ಉದ್ಯಮಿಯಾಗಿರುವ ಮುಖೇಶ್ ಅಂಬಾನಿಯವರು ಚಿನ್ನ ಖರೀದಿಸಿ ನಷ್ಟ ಅನುಭವಿಸಬೇಡಿ ಎಂದು ಭಾರತೀಯರಿಗೆ ಸಲಹೆಯನ್ನು ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಏರಿಕೆಯಾಗಿದ್ದು, ಹೂಡಿಕೆದಾರರ ಗಮನವನ್ನು ಸೆಳೆದಿವೆ. ಈ ಆಸಕ್ತಿಯ ನಡುವೆಯೇ ಮಾತನಾಡಿದ ಮುಕೇಶ್ ಅಂಬಾನಿ, ಭಾರತದಂತಹ ವೇಗವಾಗಿ ಬೆಳೆಯುತ್ತಿರುವ ದೇಶದಲ್ಲಿ ಕೇವಲ ಅಮೂಲ್ಯ ಲೋಹಗಳಲ್ಲಿ ಹಣ ಹೂಡುವುದು ಸಂಪತ್ತು ಹೆಚ್ಚಿಸಲು ಸಾಕಾಗುವುದಿಲ್ಲ ಎಂದು ಅಂಬಾನಿ ಸ್ಪಷ್ಟಪಡಿಸಿದ್ದಾರೆ. ಅಂದರೆ ಯಾವುದೇ ಕಾರಣಕ್ಕೂ ಬರೀ ಸೇವಿಂಗ್ಸ್ ಮಾಡಿಕೊಂಡೇ ಇರಬೇಡಿ, ಹೂಡಿಕೆ ಮಾಡಿ ಎಂದು ಹೇಳಿದ್ದಾರೆ. ಬಂಡವಾಳ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದರಿಂದ ಕುಟುಂಬದ ಸಂಪತ್ತು ಹೆಚ್ಚಾಗುವುದಲ್ಲದೆ ದೇಶದ ಆರ್ಥಿಕ ಬೆಳವಣಿಗೆಯೂ ವೇಗಗೊಳ್ಳುತ್ತದೆ ಎಂದಿದ್ದಾರೆ.
ಜೊತೆಗೆ ಭಾರತದ ಬೆಳವಣಿಗೆಯು ಬಲವಾದ ನೀತಿಗಳು, ರಾಜಕೀಯ ಸ್ಥಿರತೆ, ಬೃಹತ್ ಮೂಲಸೌಕರ್ಯ ನಿರ್ಮಾಣ ಮತ್ತು ಡಿಜಿಟಲ್ ಕ್ರಾಂತಿಯಲ್ಲಿ ಬೇರೂರಿದೆ ಎಂದು ಅಂಬಾನಿ ಹೇಳಿದರು. 5G, ಡಿಜಿಟಲ್ ಇಂಡಿಯಾ ಮತ್ತು ಬಂಡವಾಳ ಮಾರುಕಟ್ಟೆಗಳ ವಿಸ್ತರಣೆಯು ಭಾರತವನ್ನು ದೀರ್ಘಾವಧಿಯ ಹೂಡಿಕೆಗೆ ಆಕರ್ಷಕ ತಾಣವನ್ನಾಗಿ ಮಾಡಿದೆ. ಕೃತಕ ಬುದ್ಧಿಮತ್ತೆಯ ಮಹತ್ವದ ಬಗ್ಗೆ ಹೇಳಿದ ಅಂಬಾನಿ, ಎಐ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಆಳವಾದ ಬದಲಾವಣೆಗಳನ್ನು ತರಬಹುದು ಎಂದು ಹೇಳಿದರು. ಎಐ ಮೂಲಕ 1.4 ಶತಕೋಟಿ ಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ಸುಧಾರಿತ ಆರೋಗ್ಯ ರಕ್ಷಣೆ ಮತ್ತು ಪರಿಣಾಮಕಾರಿ ಸಾರ್ವಜನಿಕ ಸೇವೆಗಳನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಬಹುದು ಎಂದಿದ್ದಾರೆ.













