ಪೆನ್ಕ್ಯಾಪ್ ನುಂಗಿ ಪ್ರಾಣಾಪಾಯಕ್ಕೆ ಸಿಲುಕಿದ್ದ ನಾಲ್ಕು ವರ್ಷದ ಬಾಲಕನೋರ್ವನಿಗೆ ವೈದ್ಯರು ಹೊಸ ಜನ್ಮವನ್ನೇ ನೀಡಿದ್ದಾರೆ. ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ನಸ್ಪೂರ್ನಲ್ಲಿ ಈ ಘಟನೆ ನಡೆದಿದ್ದು, ಸಕಾಲದಲ್ಲಿ ಚಿಕಿತ್ಸೆ ದೊರಕಿದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಅಖಿಲ್ ಎನ್ನುವ ಬಾಲಕ ಮನೆಯಲ್ಲಿ ಆಟವಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಪೆನ್ಕ್ಯಾಪ್ ಬಾಯಿಗೆ ಹಾಕಿದ್ದಾನೆ. ಅದು ಆತನ ಗಂಟಲಲ್ಲಿ ಸಿಲುಕಿದೆ. ಆಗ ಆತನಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಮಗು ಉಸಿರಾಡಲು ಕಷ್ಟಪಡುತ್ತಿರುವುದನ್ನು ಕಂಡ ಪೋಷಕರು ಗಾಬರಿಗೊಂಡು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರು ಕೂಡಲೇ ಎಂಡೋಸ್ಕೋಪಿ ಪ್ರಕ್ರಿಯೆ ಮಾಡಿ ಜಾಗರೂಕತೆಯಿಂದ ಗಂಟಲಲ್ಲಿ ಸಿಲುಕಿದ್ದ ಪೆನ್ಕ್ಯಾಪ್ ಅನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಗುಣಮುಖನಾಗುತ್ತಿದ್ದಾನೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
