ಮಂಗಳೂರು, ಎ.13: ಮದುವೆ ಸಮಾರಂಭಕ್ಕೆ ಬಂದ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಗಂಜಿಮಠದ ರಾಯಲ್ ಪ್ಯಾಲೇಜ್ ಮತ್ತು ಒಂಡೆಲಾ ಹಾಲ್ ಮಾಲೀಕರ ವಿರುದ್ಧ ಬಜ್ಪೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.


ಭಾನುವಾರ ಮಧ್ಯಾಹ್ನ 12 ರಿಂದ 2 ಗಂಟೆಯ ಸುಮಾರಿಗೆ ಮುಚ್ಚೂರು ಕ್ರಾಸ್ ಬಳಿ ಇರುವ ಈ ಎರಡು ಸಭಾಂಗಣದಲ್ಲಿ ಮದುವೆ ಇತ್ತು. ಈ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ತಮ್ಮ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸಾಲು ಸಾಲಾಗಿ ನಿಲ್ಲಿಸಿದ್ದರು. ಇದರಿಂದ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದಲ್ಲದೆ, ಅಪಘಾತದ ಸಾಧ್ಯತೆ ಎದುರಾಗಿತ್ತು.
ಸಭಾಂಗಣದ ಮಾಲೀಕರು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡದೆ, ಹಾಲ್ ಬಾಡಿಗೆಗೆಂದು ನೀಡಿದ್ದು ಈ ಸಮಸ್ಯೆಗೆ ಕಾರಣ ಎಂದು ಪೊಲೀಸರು ಸ್ವಯಂಪ್ರೇರಿತ ದೂರನ್ನು ದಾಖಲು ಮಾಡಿದ್ದಾರೆ. ಬಜ್ಪೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಕಲಂ 126(2),285,292 ಹಾಗೂ ಐಎಂವಿ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿ ತನಿಖೆ ನಡೆಸಿದ್ದಾರೆ.
