

ಪ್ರಸಕ್ತ ಸಾಲಿನ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ 10 ಸಾವಿರ ಶಿಕ್ಷಕರು ಗೈರಾಗಿದ್ದು, ಈ ಪೈಕಿ ಖಾಸಗಿ ಶಾಲಾ ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಿದೆ.
ಎ.23ರಿಂದ ಮೇ 5ರ ವರೆಗೆ ಮೌಲ್ಯಮಾಪನ ನಡೆದಿದೆ. ಈ ಅವಧಿಯಲ್ಲಿ ಗೈರು ಹಾಜರಾಗಿರುವ ಗರ್ಭಿಣಿ, ಬಾಣಂತಿ ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಇರುವವರನ್ನು ಹೊರತುಪಡಿಸಿ ಉಳಿದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
73,236 ಶಿಕ್ಷಕರು ಈ ಬಾರಿ ನೋಂದಣಿ ಮಾಡಿಕೊಂಡಿದ್ದು, ಗೈರು ಹಾಜರಾದವರಲ್ಲಿ ಶೇ.50ರಷ್ಟು ಶಿಕ್ಷಕರು ಖಾಸಗಿ ಶಾಲೆಯವರಾಗಿದ್ದು, ಇವರ ಮೇಲೆ ಕ್ರಮ ಕೈಗೊಳ್ಳಲು ಸರಕಾರದ ವತಿಯಿಂದ ಸಾಧ್ಯವಿಲ್ಲ. ಉಳಿದ ಸರಕಾರಿ ಶಾಲೆಯ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವಂತೆ ಡಿಡಿಪಿಐಗಳಿಗೆ ಸೂಚನೆ ನೀಡಲಾಗಿದೆ. ಗೈರು ಹಾಜರಾದವರಿಗೆ ದಂಡ ವಿಧಿಸುವುದು ಅಥವಾ ಮುಂದಿನ ವರ್ಷದ ಮೌಲ್ಯಮಾಪನ ಕಾರ್ಯಕ್ಕೆ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.













