Home Interesting ಇನ್ಮುಂದೆ ವಿಮಾನ ರೈಲುಗಳಲ್ಲೂ ದೊರೆಯಲಿದೆ ಥರಾವರಿ ನಂದಿನಿ ಪ್ರಾಡಕ್ಟ್ಸ್ !

ಇನ್ಮುಂದೆ ವಿಮಾನ ರೈಲುಗಳಲ್ಲೂ ದೊರೆಯಲಿದೆ ಥರಾವರಿ ನಂದಿನಿ ಪ್ರಾಡಕ್ಟ್ಸ್ !

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಇನ್ಮುಂದೆ ಕಾಮಧೇನು ವಿಮಾನ ಏರಲಿದ್ದಾಳೆ. ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಇನ್ಮುಂದೆ ಕೆಎಂಎಫ್‌ನಿಂದ ಫ್ಲೈಟ್‌ ಕ್ಯಾಟರಿಂಗ್‌ ಮೂಲಕ ವಿಮಾನ, ರೈಲಿನಲ್ಲೂ ನಂದಿನಿ ಲಸ್ಸಿ ಉತ್ಪನ್ನಗಳು ದೊರಕಲಿದೆ.

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಮತ್ತು ಹಾಸನ ಹಾಲು ಒಕ್ಕೂಟದ ವತಿಯಿಂದ ಪ್ರಥಮ ಬಾರಿಗೆ ಫ್ಲೈಟ್‌ ಕೇಟರಿಂಗ್‌ ಗೆ ನಂದಿನಿ ಗುಡ್‌ಲೈಫ್‌ ಸುವಾಸಿತ ಹಾಲು, ಮಜ್ಜಿಗೆ, ಲಸ್ಸಿ ಜತೆಗೆ ಮಿಲ್ಕ್ ಶೇಕ್‌ ಪೆಟ್‌ ಬಾಟಲ್‌ ಸಹಾ ಸರಬರಾಜು ಮಾಡಲಾಗುತ್ತದೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ಏರ್‌ ಇಂಡಿಯಾ ಮತ್ತು ವಿಸ್ತಾರ ಸಂಸ್ಥೆಗಳ ವಿಮಾನಗಳ ಫ್ಲೈಟ್‌ ಕೇಟರಿಂಗ್‌ನಲ್ಲಿ ನಂದಿನಿಯ ಪೆಟ್‌ ಬಾಟಲ್‌ ಹಾಲಿನ ಉತ್ಪನ್ನಗಳು ದೊರೆಯಲಿವೆ. ಪೆಟ್‌ ಬಾಟಲ್‌ ಹಾಲಿನ ಉತ್ಪನ್ನಗಳನ್ನೊಳಗೊಂಡ ವಾಹನಕ್ಕೆ ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಅವರು ಶುಕ್ರವಾರ ಹಸಿರು ನಿಶಾನೆ ತೋರಿದ್ದಾರೆ.

ಹಾಗೆಯೇ ಹಾಸನ ಹಾಲು ಒಕ್ಕೂಟದಿಂದ ಭಾರತೀಯ ರೈಲ್ವೆಗೆ ಸುವಾಸಿತ ಹಾಲಿನ ಉತ್ಪನ್ನ ಪೂರೈಸಲಾಯಿತು. ಒಕ್ಕೂಟದ ಅಧ್ಯಕ್ಷ, ಶಾಸಕ ಎಚ್‌.ಡಿ.ರೇವಣ್ಣ, ಶಾಸಕ ಸಿ.ಎನ್‌.ಬಾಲಕೃಷ್ಣ ಅವರು 5 ವಾಹನಗಳಿಗೆ (75000 ಲೀಟರ್‌/3.75 ಲಕ್ಷ ಬಾಟಲ್‌) ಹಾಸನದಲ್ಲಿ ಚಾಲನೆ ನೀಡಿದರು. ಈ ವಾಹನಗಳು ಮುಂಬಯಿ, ಚೆನ್ನೈ, ಪುಣೆ ಮತ್ತು ಬೆಂಗಳೂರು ರೈಲ್ವೆ ಕೇಟರಿಂಗ್‌ ಡಿಪೋ ತಲುಪಲಿವೆ. ನಂತರ ರೈಲುಗಳಲ್ಲಿ ಪ್ರಯಾಣಿಕರಿಗೆ ಲಭ್ಯವಾಗಲಿವೆ.

ಭಾರತೀಯ ರೈಲ್ವೆ ಮತ್ತು ವಿಮಾನಯಾನ ಸಂಸ್ಥೆಯ ಅಧಿಕೃತ ಕೇಟರರ್ಸ್ ಸಂಪರ್ಕಿಸಿ ನಂದಿನಿ ಗುಡ್‌ಲೈಫ್‌ನ ಸುವಾಸಿತ ಹಾಲು ಮತ್ತು ಮಿಲ್ಕ್ ಶೇಕ್‌ ಸರಬರಾಜು ಮಾಡಲಾಗುತ್ತಿದೆ. ಆರಂಭಿಕ ಹಂತದಲ್ಲಿ ತಿಂಗಳಿಗೆ 3 ಲಕ್ಷ ಲೀಟರ್‌ ಒದಗಿಸಲಾಗುವುದು. ಬೇಸಿಗೆ ಅವಧಿಯಲ್ಲಿ5ರಿಂದ 6 ಲಕ್ಷ ಲೀಟರ್‌ಗೆ ಬೇಡಿಕೆ ಬರುವ ಸಾಧ್ಯತೆಗಳಿವೆ ಎಂದು ಕೆಎಂಎಫ್‌ ತಿಳಿಸಿದೆ.

ಕೆಎಂಎಫ್‌ನ ಸದಸ್ಯ ಜಿಲ್ಲಾ ಹಾಲು ಒಕ್ಕೂಟವಾದ ಹಾಸನ ಜಿಲ್ಲಾ ಸಹಕಾರಿ ಹಾಲು ಒಕ್ಕೂಟವು 170 ಕೋಟಿ ರೂ. ವೆಚ್ಚದಲ್ಲಿ ದಕ್ಷಿಣ ಭಾರತದಲ್ಲಿಯೇ ಮೊದಲ ಸ್ವಯಂಚಾಲಿತ ವಿದ್ಯುನ್ಮಾನ ನಿಯಂತ್ರಿತ ಅತ್ಯಾಧುನಿಕ ತಂತ್ರಜ್ಞಾನದ ಪೆಟ್‌ ಬಾಟಲ್‌ ತಯಾರಿಕಾ ಘಟಕ ಸ್ಥಾಪಿಸಿದೆ. 2022ರ ಫೆಬ್ರವರಿಯಿಂದ ಉತ್ಪಾದನೆ ಆರಂಭಿಸಿದ್ದು, ನಿತ್ಯ 5 ಲಕ್ಷ ಬಾಟಲ್‌ ತಯಾರಾಗುತ್ತಿವೆ.

ಇಲ್ಲಿ ನಂದಿನಿ ಗುಡ್‌ಲೈಫ್‌ನ ಉಪ ಬ್ರ್ಯಾಂಡ್‌ನಲ್ಲಿ ಬಾದಾಮಿ, ಪಿಸ್ತಾ, ಸ್ಟ್ರಾಬೆರಿ ಸುವಾಸಿತ ಹಾಲು, ಮಾವಿನ ಹಣ್ಣಿನ ಲಸ್ಸಿ, ಸಾದಾ ಲಸ್ಸಿ, ಚಾಕೋಲೇಟ್‌, ವೆನಿಲ್ಲಾ, ಬನಾನಾ ಮಿಲ್ಕ್‌ ಶೇಕ್‌, ಮಸಾಲ ಮಜ್ಜಿಗೆ ಸಿದ್ಧಪಡಿಸಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ನಂದಿನಿ ಸುವಾಸಿತ ಹಾಲಿನ ಮಾರು ಕಟ್ಟೆಯನ್ನು ದೇಶಾದ್ಯಂತ ವಿಸ್ತರಿಸಲಾಗುತ್ತಿದೆ. ದೇಶದ ಗಡಿ ಭಾಗದ ಪ್ರದೇಶ ಗಳಾದ ಲೇಹ್ ಮತ್ತು ಲಡಾಕ್‌ವರೆಗೆ ಮಾರಾಟ ಜಾಲ ವಿಸ್ತರಿಸಿದ್ದು, ಗ್ರಾಹಕ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬಿ.ಸಿ.ಸತೀಶ್‌ ಅವರು ತಿಳಿಸಿದರು.