

ಪಲ್ಲವಿ ಅನಂತ್ ಪೂಮಗಾಮೆ ನಿರ್ಮಾಣದ, ಬಡಿಗೇರ್ ದೇವೇಂದ್ರ ನಿರ್ದೇಶನದ ಹಾಗೂ ವೈಜನಾಥ್ ಬಿರಾದಾರ್, ಮೇಘನಾ ಬೆಳವಾಡಿ, ಪ್ರಕಾಶ್ ಬೆಳವಾಡಿ ಮುಂತಾದವರು ಪ್ರಮುಖಪಾತ್ರದಲ್ಲಿ ನಟಿಸಿರುವ “ವನ್ಯಾ” ಚಿತ್ರ ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನವಾಗಿದೆ. ಪ್ರದರ್ಶನದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಈಗಾಗಲೇ ನಮ್ಮ ಚಿತ್ರ ಹತ್ತಕ್ಕೂ ಹೆಚ್ಚು ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಪ್ರಸ್ತುತ ನಮ್ಮ ಬೆಂಗಳೂರು ಚಿತ್ರೋತ್ಸವದಲ್ಲಿ “ವನ್ಯಾ” ಚಿತ್ರ ಪ್ರದರ್ಶನವಾಗಿರುವುದು ಬಹಳ ಖುಷಿಯಾಗಿದೆ. “ವನ್ಯಾ” ಕಾಡಿನ ಪ್ರಮುಖ್ಯತೆ ತಿಳಿಸುವ ಚಿತ್ರ. ನಗರದವರು ಈಗ ವಿಶ್ರಾಂತಿಗಾಗಿ ಕಾಡಿಗೆ ಹೋಗುತ್ತಿದ್ದಾರೆ. ಅದರಿಂದ ನಮ್ಮ ಕಾಡುಗಳಿಗೆ ಹೆಚ್ಚು ಹಾನಿಯಾಗುತ್ತಿದೆ. ಕಾಡಿನಲ್ಲಿ ನೆಲೆಸಿರುವ ಎಷ್ಟೋ ಜನರು ನಾಡಿನತ್ತ ಮುಖ ಮಾಡುತ್ತಿದ್ದಾರೆ. ಈ ರೀತಿಯ ವಿಭಿನ್ನ ಕಥಾಹಂದರ ಹೊಂದಿರುವ ನಮ್ಮ ಚಿತ್ರವನ್ನು ಚಿತ್ರೋತ್ಸವದಲ್ಲಿ ನೋಡಿದವರು ನೀಡಿದ ಪ್ರಶಂಸೆಗೆ ಮನ ತುಂಬಿ ಬಂದಿದೆ ಎಂದು ನಿರ್ದೇಶಕ ಬಡಿಗೇರ್ ದೇವೆಂದ್ರ ತಿಳಿಸಿದರು.
ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ. ಕಾಡನ್ನು ಬಿಟ್ಟು ನಾಡಿಗೆ ಬರಲು ಮನಸ್ಸಿಲ್ಲದ ವಯಸ್ಸಾದ ವ್ಯಕ್ತಿಯ ಪಾತ್ರ ನನ್ನದು ಎಂದು ಹಿರಿಯ ನಟ ವೈಜನಾಥ ಬಿರಾದಾರ್ ಹೇಳಿದರು.
ಚಿತ್ರದಲ್ಲಿ ನಟಿಸಿರುವ ಅಶ್ವಿನ್ ಹಾಸನ್, ಯಶವಂತ್ ಹಾಗೂ ನಿರ್ಮಾಪಕಿ ಪಲ್ಲವಿ ಅನಂತ್ ಪೂಮಗಾಮೆ ಮುಂತಾದವರು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ “ವನ್ಯಾ” ಚಿತ್ರ ಪ್ರದರ್ಶನವಾಗಿರುವುದಕ್ಕೆ ಸಂತಸಪಟ್ಟರು.













