Home Entertainment ಕಥೆಗಿಂತ ವ್ಯಾಪಾರ ವಿಭಾಗದಲ್ಲಿ ಹೆಚ್ಚಿನ ಸವಾಲುಗಳಿವೆ: ಅದಿತಿ ಆನಂದ್

ಕಥೆಗಿಂತ ವ್ಯಾಪಾರ ವಿಭಾಗದಲ್ಲಿ ಹೆಚ್ಚಿನ ಸವಾಲುಗಳಿವೆ: ಅದಿತಿ ಆನಂದ್

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು ಚಿತ್ರೋತ್ಸವ ವೇದಿಕೆ: ‘ನಿಮ್ಮನ್ನೇ ನೀವು ಬ್ರಾಂಡ್ ಮಾಡಿಕೊಳ್ಳಲು ಇದು ಸಕಾಲ. ನಿಮ್ಮದೇ ಒಂದು ವೇದಿಕೆ ಸೃಷ್ಟಿ ಮಾಡಿಕೊಳ್ಳಬೇಕು. ನೀವೇ ಒಂದು ಬ್ರಾಂಡ್ ಆಗಬೇಕುʼ ಎಂದು ‘ಬೈಸನ್ʼ, ‘ನೋ ವನ್ ಕಿಲ್ಡ್ ಜೆಸ್ಸಿಕಾʼ ಖ್ಯಾತಿಯ ನಿರ್ಮಾಪಕಿ ಅದಿತಿ ಆನಂದ್ ಹೇಳಿದರು.

ʼಸ್ಟೋರೀಸ್ ದಟ್ ಮ್ಯಾಟರ್ʼ ಎಂಬ ಗೋಷ್ಠಿಯಲ್ಲಿ ಯುವ ಸಿನಿಮಾಸಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈಗ ಮಾಧ್ಯಮದ ಬಗ್ಗೆ ಯುವ ಸಿನಿಮಾಸಕ್ತರು ಜಾಸ್ತಿ ಯೋಚನೆ ಮಾಡಬಾರದು. ಎಲ್ಲಾ ವೇದಿಕೆಗಳಲ್ಲೂ ಕಂಟೆಂಟ್ ಸೃಷ್ಟಿ ಮಾಡುವ ಕಡೆಗೆ ಗಮನ ಹರಿಸಬೇಕು. ನಿಮ್ಮ ಕಂಟೆಂಟ್ ಯಾವುದೇ ರೀತಿಯಲ್ಲೂ ನಿರ್ಮಾಪಕರನ್ನು ತಲುಪಬಹುದುʼ ಎಂದು ಹೇಳಿದರು.

ʼಪ್ರಸ್ತುತ ಕಥೆ ವಿಚಾರದಲ್ಲಿ ಅಥವಾ ಕಂಟೆಂಟ್ ವಿಚಾರದಲ್ಲಿ ಹೆಚ್ಚಿನ ಸವಾಲುಗಳಿಲ್ಲ. ಆದರೆ, ವ್ಯಾಪಾರ ದೃಷ್ಟಿಯಲ್ಲಿ ಬಹಳ ದೊಡ್ಡ ಸವಾಲುಗಳಿವೆ. ಮೊದಲು ಉತ್ತರದಲ್ಲಿ ಆರೇಳು ಮಂದಿ ವಿತರಕರಿದ್ದರು. ಈಗ ಮೂರ್ನಾಲ್ಕು ಮಂದಿ ಮಾತ್ರ ವಿತರಕರಿದ್ದಾರೆ. ವ್ಯಾಪಾರ ಹಿನ್ನೆಲೆಯಲ್ಲಿ ನೋಡಿದರೆ ಸಾಕಷ್ಟು ಅಡ್ಡಿಗಳಿವೆʼ ಎಂದು ಅವರು ಹೇಳಿದರು.

ಈ ವೇಳೆ ಯುವ ಸಿನಿಮಾಸಕ್ತರನ್ನು ಪ್ರೋತ್ಸಾಹಿಸಿ ಮಾತನಾಡಿದ ಅವರು, ‘ನಿಮಗೆ ಯಾರ ಜೊತೆಯಾದರೂ ಕೆಲಸ ಮಾಡುವ ಆಸಕ್ತಿ ಇದ್ದರೆ ಅವರನ್ನು ಹೇಗಾದರೂ ಮಾಡಿ ತಲುಪಬೇಕು. ಸತತ ಪ್ರಯತ್ನ ಮಾಡಬೇಕುʼ ಎಂದರು.

ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡುವ ಕುರಿತು ಮಾತನಾಡಿದ ಅವರು, ‘ನನ್ನ ಪಾಲುದಾರರು ಮಂಗಳೂರಿನವರು. ಅವರ ಅಮ್ಮ ನನಗೆ ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡಲು ಹೇಳುತ್ತಿದ್ದಾರೆ. ಹಾಗಾಗಿ ಕನ್ನಡದಲ್ಲಿಯೂ ಸಿನಿಮಾ ಮಾಡುವ ಸಾಧ್ಯತೆಗಳಿವೆʼಎಂದರು.

ಮಹಿಳಾ ನಿರ್ಮಾಪಕರಿಗೆ ಕಿವಿಮಾತು ಹೇಳಿದ ಅವರು, ‘ಮಹತ್ವಾಕಾಂಕ್ಷೆಯಿಂದ ಮುಂದೆ ಸಾಗಿ. ಸಿಗುವ ಯಾವುದೇ ಅವಕಾಶವನ್ನು ಹಿಂಜರಿಕೆಯಿಂದ ಬಿಡಬೇಡಿ. ನಿಮ್ಮ ಪಾಲುದಾರ ಗಂಡಸರು ಮಾಡಿದ ತಪ್ಪಿಗೆ ನೀವು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಡಿʼಎಂದು ಹೇಳಿದರು.

ʼಈಗ ಸಹ ನಿರ್ಮಾಣದ ಮೂಲಕ ಸಿನಿಮಾ ನಿರ್ಮಾಣ ಮಾಡುವುದು ತುಂಬಾ ಒಳ್ಳೆಯದು. ಒಂದು ತಂಡ ಮಾಡಿಕೊಂಡು ಒಟ್ಟಿಗೆ ಬೆಳೆಯುವುದರ ಕಡೆಗೆ ಗಮನ ಕೊಡಬೇಕುʼ ಎಂದರು.

ಹಿರಿಯ ಪತ್ರಕರ್ತೆ ಲತಾ ಶ್ರೀನಿವಾಸನ್ ಗೋಷ್ಠಿ ನಿರ್ವಹಿಸಿದರು.