Home » ಉಡುಪಿ: ಲಕ್ಷ್ಮೀ ಲಾಕೆಟ್‌ ಸರ ಎಂದು ನಂಬಿಸಿ ಮಹಿಳೆಯಿಂದ ಅಸಲಿ ಚಿನ್ನ ದೋಚಿದ ದಂಪತಿ

ಉಡುಪಿ: ಲಕ್ಷ್ಮೀ ಲಾಕೆಟ್‌ ಸರ ಎಂದು ನಂಬಿಸಿ ಮಹಿಳೆಯಿಂದ ಅಸಲಿ ಚಿನ್ನ ದೋಚಿದ ದಂಪತಿ

0 comments

ಉಡುಪಿ: ನಕಲಿ ಬಂಗಾರದ ಆಭರಣಗಳನ್ನು ಬಳಸಿಕೊಂಡು ವಂಚನೆ ಮಾಡಿದ ಆರೋಪದಲ್ಲಿ ಪಡುಬಿದ್ರಿ ಪೊಲೀಸರು ಮಹಿಳೆಯೊಬ್ಬರನ್ನು ಬಂಧನ ಮಾಡಿದ್ದಾರೆ. ನಕಲಿ ಆಭರಣಗಳನ್ನು ನಿಜವಾದ ಆಭರಣ ಎಂದು ಹೇಳಿ ನಗದು ಹಣಕ್ಕೆ ಬದಲಾವಣೆ ಮಾಡಿ ಮೋಸ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿಯ ಅನುಸಾರ, ಜನವರಿ 13 ರಂದು ಕಾಪು ತಾಲೂಕು ನಾಡ್ಸಾಲು ಗ್ರಾಮದ ಹಳೆಯ ಅಂಚೆ ಕಚೇರಿ ಸಮೀಪ ಈ ಘಟನೆ ನಡೆದಿದೆ. ಬಸ್ಸಮ್ಮ ಎನ್ನುವ ಮಹಿಳೆ ಆ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವ ಪುರುಷ ಹಾಗೂ ಮಹಿಳೆ ಅವರನ್ನು ಸಂಪರ್ಕ ಮಾಡಿದ್ದು, ಬಂಗಾರದ ರೀತಿ ಕಾಣುವ ಸರವನ್ನು ತೋರಿಸಿ, ಅದರಲ್ಲಿ ಲಕ್ಷ್ಮೀ ಲಾಕೆಟ್‌ ಇದ್ದು ಆರು ಪವನ್‌ ತೂಕವಿದೆ ಎಂದು ಹೇಳಿ ನಂಬಿಸಿದ್ದಾರೆ.

ಇವರ ಮಾತುಗಳನ್ನು ನಂಬಿದ ಬಸ್ಸಮ್ಮ ಎರಡು ಸವರಣ ತೂಕದ ತನ್ನ ಬಂಗಾರದ ಆಭರಣಗಳು ಸುಮಾರು ಒಂದೂವರೆ ಲಕ್ಷ ಮೌಲ್ಯ, ಹಾಗೂ ಆರು ಸಾವಿರ ನಗದು ಹಣವನ್ನು ನೀಡಿದ್ದಾರೆ. ನಂತರ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಬಸ್ಸಮ್ಮ ಸಮೀಪದ ಆಭರಣ ಅಂಗಡಿಯಲ್ಲಿ ಸರವನ್ನು ಪರಿಶೀಲನೆ ಮಾಡಿದಾಗ ಅದು ನಕಲಿ ಎನ್ನುವುದು ಬಹಿರಂಗವಾಗಿದೆ. ಕೂಡಲೇ ಅವರು ಘಟನೆ ನಡೆದ ಸ್ಥಳಕ್ಕೆ ಹೋದರೂ ಅದಾಗಲೇ ಆರೋಪಿಗಳು ಸ್ಥಳದಿಂದ ಎಸ್ಕೇಪ್‌ ಆಗಿದ್ದರು.

ಈ ಕುರಿತು ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ. ತನಿಖೆ ಸಂದರ್ಭ,ಆರೋಪಿಗಳಲ್ಲಿ ಒಬ್ಬಳನ್ನು ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿಯ ಬುಡುಗನಹಳ್ಳಿ ನಿವಾಸಿ ಕಾವ್ಯ ಎಂದು ಗುರುತಿಸಲಾಗಿದ್ದು, ಇನ್ನೋರ್ವ ಆರೋಪಿ ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ತಾಲೂಕಿನ ವೆಂಕಟೇಶ್‌ ಎಂದು ತಿಳಿದು ಬಂದಿದೆ.

banner

ಪೊಲೀಸರು ಕಾವ್ಯಳನ್ನು ಬಂಧನ ಮಾಡಿ ಆಕೆಯಿಂದ 7.610 ಗ್ರಾಂ ತೂಕದ (ಸುಮಾರು 75ಸಾವಿರ ಮೌಲ್ಯದ) ಬಂಗಾರದ ಆಭರಣಗಳು ಹಾಗೂ 6000 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಇನ್ನೋರ್ವ ಆರೋಪಿ ವೆಂಕಟೇಶ್‌ಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

You may also like