Home » ಪುತ್ತೂರು: ಮೊದಲ ಮದುವೆ ಮುಚ್ಚಿಟ್ಟು 2ನೇ ವಿವಾಹವಾದ ವ್ಯಕ್ತಿ; ಅತ್ತೆ ಮತ್ತು ಗ್ಯಾಂಗ್‌ನಿಂದ ಅಪಹರಿಸಿ ಹಲ್ಲೆ

ಪುತ್ತೂರು: ಮೊದಲ ಮದುವೆ ಮುಚ್ಚಿಟ್ಟು 2ನೇ ವಿವಾಹವಾದ ವ್ಯಕ್ತಿ; ಅತ್ತೆ ಮತ್ತು ಗ್ಯಾಂಗ್‌ನಿಂದ ಅಪಹರಿಸಿ ಹಲ್ಲೆ

0 comments

ಪುತ್ತೂರು: ಮೊದಲ ಮದುವೆಯನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದ ವ್ಯಕ್ತಿಗೆ ಆತನ ಎರಡನೇ ಪತ್ನಿಯ ಮನೆಯವರು ಅಪಹರಣ ಮಾಡಿ, ಮನೆಯೊಂದರಲ್ಲಿ ಕೂಡಿ ಹಾಕಿ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಕೆಮ್ಮಿಂಜೆ ಗ್ರಾಮದ ಬೆಳ್ಳಗುಡ್ಡೆ ನಿವಾಸಿ ಮಹಮ್ಮದ್‌ ಅಶ್ರಫ್‌ (35) ಹಲ್ಲೆಗೊಳಗಾದ ವ್ಯಕ್ತಿ. ಅಶ್ರಫ್‌ಗೆ ಈ ಮೊದಲೇ ಖತೀಜಾ ಎನ್ನುವಾಕೆಯ ಜೊತೆ ವಿವಾಹವಾಗಿತ್ತು. ಆದರೆ ಈ ವಿಷಯವನ್ನು ಗೌಪ್ಯವಾಗಿಟ್ಟು ಆತ, ಮೂಡಬಿದಿರೆಯ ಐಸಮ್ಮ ಎನ್ನುವವರ ಪುತ್ರಿ ರುಬಿಯಾ ಎಂಬಾಕೆಯನ್ನು ಪ್ರೀತಿ ಮದುವೆಯಾಗಿದ್ದ.

ಅಶ್ರಫ್‌ನ ಎರಡನೇ ಮದುವೆಯ ವಿಷಯ ತಿಳಿದ ಮೊದಲ ಪತ್ನಿ ಖತೀಜಾ ಈ ಹಿಂದೆಯೇ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದರು. ಪ್ರಸ್ತುತ ಈ ವಿಷಯ ನ್ಯಾಯಾಲಯದಲ್ಲಿದೆ.

ಈ ಎರಡನೇ ಮದುವೆಯ ಕುರಿತು ತಿಳಿದ ಎರಡನೇ ಪತ್ನಿ ರುಬಿಯಾಳ ತಾಯಿ ಐಸಮ್ಮ, ಅಶ್ರಫ್‌ನನ್ನು ತನ್ನ ಮಗಳಿಂದ ಬೇರೆ ಮಾಡುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಮೇ.1 ರಂದು ಮುಂಜಾನೆ 1.30 ರ ಸುಮಾರಿಗೆ ಐಸಮ್ಮ ಮತ್ತು ಆಕೆಯ ಐವರು ಸಹಚರರು ಅಶ್ರಫ್‌ ಮನೆಗೆ ನುಗ್ಗಿ, ನಿದ್ದೆಯಲ್ಲಿದ್ದ ಅಶ್ರಫ್‌ನನ್ನು ಬಲವಂತವಾಗಿ ಎಬ್ಬಿಸಿ, ಕಾರಿನೊಳಗೆ ತಳ್ಳಿಕೊಂಡು ಅಪಹರಣ ಮಾಡಿದ್ದಾರೆ.

banner

ಅಪಹರಣ ಮಾಡಿದ ಅಶ್ರಫ್‌ನನ್ನು ವಿಟ್ಲದ ಸಾರಡ್ಕದಲ್ಲಿರುವ ರುಬಿಯಾಳ ಅಣ್ಣನ ಮನೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ರೂಮೊಂದರಲ್ಲಿ ಕೂಡಿ ಹಾಕಿ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ನಂತರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ನೆಹರುನಗರದ ಬಳಿ ಆತನನ್ನು ಬಿಟ್ಟ ಆರೋಪಿಗಳು ಜೀವಬೆದರಿಕೆ ಹಾಕಿ ಬಿಟ್ಟಿದ್ದಾರೆ, ಮತ್ತು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂತ್ರಸ್ತ ಮಹಮ್ಮದ್‌ ಅಶ್ರಫ್‌ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಎರಡನೇ ಪತ್ನಿಯ ತಾಯಿ ಐಸಮ್ಮ, ತಂದೆ ಅಬ್ಬಾಸ್‌, ಮೊದಲ ಪತ್ನಿ ಖತೀಜಾ, ಅನ್ಸಲ್‌, ಸಾಗರ್‌, ಸಾಹದ್‌, ಆರೀಫ್‌ ಮೂಡಬಿದಿರೆ, ಸಮೀರ್‌ ಸೇರಿ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ದೂರನ್ನು ನೀಡಲಾಗಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ.

You may also like