Home » ನೆಲ್ಯಾಡಿ ನಿವಾಸಿ ಉಡುಪಿಯಲ್ಲಿ ಆತ್ಮಹತ್ಯೆ

ನೆಲ್ಯಾಡಿ ನಿವಾಸಿ ಉಡುಪಿಯಲ್ಲಿ ಆತ್ಮಹತ್ಯೆ

0 comments

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಹೊಸಮಜಲು ನಿವಾಸಿಯೊಬ್ಬರು ಉಡುಪಿ ನಗರದ ಹಳೆ ಸರಕಾರಿ ಬಸ್ಸು ನಿಲ್ದಾಣ ಸಮೀಪದ ವಸತಿ ಗೃಹದ ಬಾಡಿಗೆ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ. ಮಾ.15 ರಂದು ಈ ಘಟನೆ ನಡೆದಿದೆ.

ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಗುಡ್ಡೆ ನಿವಾಸಿ ಮಥಾಯಿ ಅವರ ಪುತ್ರ ಜಿನ್ಸನ್‌ ಪಿ ಎಂ (38) ಆತ್ಮಹತ್ಯೆ ಮಾಡಿಕೊಂಡವರು.

ಜಿನ್ಸನ್‌ ಅವರು ಮಂಗಳೂರು ಬರ್ಕೆಯ ಕೋಸ್ಟಲ್‌ಗಾರ್ಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಪತ್ನಿ ಇಬ್ಬರು ಮಕ್ಕಳ ಜೊತೆ ಅಲ್ಲೇ ವಾಸವಾಗಿದ್ದರು. ಮಾ.14 ರಂದು ಮಧ್ಯಾಹ್ನ ಮಂಗಳೂರಿನ ಮನೆಯಿಂದ ಹೋದವರು 3 ಗಂಟೆ ವೇಳೆಗೆ ಪತ್ನಿಗೆ ಹಾಗೂ ಸಂಜೆ 6 ಗಂಟೆ ವೇಳೆಗೆ ತಾಯಿಗೆ ಫೋನ್‌ ಮಾಡಿ ಆರೋಗ್ಯ ವಿಚಾರಿಸಿದ್ದರು.

ಉಡುಪಿಗೆ ತೆರಳಿದ್ದ ಜಿನ್ಸನ್‌ ಪಿ.ಎಂ. ಅವರು ಉಡುಪಿ ನಗರದ ಹಳೆ ಸರಕಾರಿ ಬಸ್ಸು ನಿಲ್ದಾಣದ ಸಮೀಪದ ವಸತಿ ಗೃಹದಲ್ಲಿ ಕೊಠಡಿ ಬಾಡಿಗೆ ಪಡೆದುಕೊಂಡಿದ್ದರು. ಮಾ 15 ರಂದು ಮಧ್ಯಾಹ್ನದವರೆಗೂ ವಸತಿಗೃಹದ ಬಾಗಿಲು ತೆರೆಯದ ಕಾರಣ ರೂಂ ಬಾಯ್‌ ಪರಿಶೀಲನೆ ಮಾಡಲೆಂದು ಹೋದಾಗ ಜಿನ್ಸನ್‌ ಫ್ಯಾನಿಗೆ ನೇಣು ಬಿಗಿದಿರುವುದು ಕಂಡು ಬಂದಿರುವುದಾಗಿ ವರದಿಯಾಗಿದೆ.

banner

ನಂತರ ಜಿನ್ಸನ್‌ ಅವರ ಮೊಬೈಲ್‌ನಲ್ಲಿದ್ದ ಅವರ ತಾಯಿಯ ಫೋನ್‌ ನಂಬರ್‌ಗೆ ಕರೆ ಮಾಡಿ ಉಡುಪಿ ಪೊಲೀಸರು ಘಟನೆ ಕುರಿತು ಮಾಹಿತಿ ನೀಡಿದ್ದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಪೊಲೀಸರು ಕುಟುಂಬದವರಿಗೆ ನೀಡಿದ್ದು, ಮಾ.16 ರಂದು ನೆಲ್ಯಾಡಿಯ ಮನೆಗೆ ತಂದು ನೆಲ್ಯಾಡಿ ಚರ್ಚ್‌ನಲ್ಲಿ ಅಂತಿಮ ಸಂಸ್ಕಾರ ಮಾಡಲಾಗಿದೆ.

ವೈಯಕ್ತಿಕ ಕಾರಣದಿಂದ ಜಿನ್ಸನ್‌ ಪಿಎಂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ದಾಖಲಾಗಿರುವ ಕುರಿತು ವರದಿಯಾಗಿದೆ.

You may also like