ಬೆಂಗಳೂರು: ವ್ಯಕ್ತಿಯೊಬ್ಬರ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿರುವ ವ್ಯಕ್ತಿ ಆತನ ಅಪ್ರಾಪ್ತ ಪುತ್ರಿ ಜೊತೆ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿರುವ ಆರೋಪದ ಮೇರೆಗೆ, ನಗರದ ಕಾಂಗ್ರೆಸ್ ಮುಖಂಡನೊಬ್ಬನನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.


ಮಾಳಗಾಳದ ನಿವಾಸಿಯಾದ 40 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಆರೋಪಿ ಆನಂದ್ ಪಿ. (ಆನಂದ್ ನಾಯ್ಡು) ಎಂಬುವರನ್ನು ಬಂಧಿಸಲಾಗಿದೆ. ದೂರುದಾರರ ಅಪ್ರಾಪ್ತ ಪುತ್ರಿ ಜತೆ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ ಆರೋಪದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ದೂರುದಾರರು 2008 ರಲ್ಲಿ ಯುವತಿಯೊಬ್ಬರನ್ನು ಮದುವೆ ಆಗಿದ್ದರು. ಆದರೆ ಆ ಮಹಿಳೆ ತನಗೆ ಈಗಾಗಲೇ ಮದುವೆಯಾಗಿ ಹೆಣ್ಣು ಮಗು ಇರುವುದನ್ನು ಮುಚ್ಚಿಟ್ಟು ವಿವಾಹವಾಗಿ ವಂಚನೆ ಮಾಡಿದ್ದರು. ಆದರೂ ತಾನು ಆಕೆ ಜೊತೆ ಸಂಸಾರ ಮಾಡುತ್ತಿದ್ದೆ. ಈ ಮಧ್ಯೆ ತಮಗೆ ಇಬ್ಬರು ಮಕ್ಕಳು ಜನಿಸಿದ್ದರು. ನಂತರ ತಂದೆಯ ವ್ಯಾಪಾರ ನೋಡಿಕೊಳ್ಳಲು ಆರಂಭಿಸಿ, ಮಾಳಗಾಳದಲ್ಲಿ ನಿವೇಶನ ಖರೀದಿಸಿ ಹೊಸ ಮನೆ ಕಟ್ಟಿದ್ದೆ. ಆದರೆ 2016 ರಲ್ಲಿ ಪತ್ನಿ ಜಿಮ್ವೊಂದಕ್ಕೆ ಸೇರಿದ್ದು, ಅಲ್ಲಿ ಜಿಮ್ ಟ್ರೈನರ್ ಪ್ರಶಾಂತ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. 2018 ರಲ್ಲಿ ಇನ್ನೊಂದು ಜಿಮ್ಗೆ ಸೇರಿದ್ದು, ಉಮೇಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ನಂತರ ಸುಂಕದಕಟ್ಟೆ ಶಿವು ಎಂಬಾತನ ಜೊತೆಯೂ ಅನೈತಿಕ ಸಂಬಂಧ ಹೊಂದಿದ್ದರು. ಈ ಕುರಿತು ಪ್ರಶ್ನೆ ಮಾಡಿದಾಗ ತನ್ನ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ದೂರಲಾಗಿದೆ.
2022 ರಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಆನಂದ್ ಎನ್ನುವಾತನ ಪರಿಚಯವಾಗಿದ್ದು, ಆಕೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಈ ಅಕ್ರಮ ಸಂಬಂಧಕ್ಕೆ ತಾನು ನನ್ನ ಮಕ್ಕಳು ಅಡ್ಡಿಯಾಗುತ್ತೇವೆ ಎಂದು ಇಬ್ಬರು ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಆನಂದ್ ತನ್ನ ಅಪ್ರಾಪ್ತ ಪುತ್ರಿ ಜೊತೆ ಅನುಚಿತ ವರ್ತನೆ ಮಾಡಿದ್ದ. ಅದರ ಜೊತೆಗೆ ತನಗೆ ಪ್ರಾಣ ಬೆದರಿಕೆ ಹಾಕಿ, ಆಸ್ತಿಯ ಹಕ್ಕು ಬಿಡುಗಡೆ ಪತ್ರ ಮತ್ತು ದಾನಪತ್ರ ಬರೆಸಿಕೊಂಡಿದ್ದಾರೆ. ನಂತರ ತನ್ನನ್ನು ಮನೆಯಿಂದ ಹೊರಗಡೆ ಹಾಕಿದರು. ಆ ನಂತರವೂ ಮಕ್ಕಳು ನನ್ನನ್ನು ನೋಡಲು ಬರುತ್ತಿದ್ದಾಗ, ಮಕ್ಕಳು ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತು ಹೇಳಿಕೊಂಡಿದ್ದರು. ಹೀಗಾಗಿ ಪತ್ನಿ ಮತ್ತು ಆಕೆಯ ಪ್ರಿಯಕರ ಆನಂದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಆನಂದ್ ಸೇರಿ ಮಹಿಳೆಯ ವಿರುದ್ಧ ಪೋಕ್ಸೋ ಹಾಗೂ ಇತರೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೊಪಿಯನ್ನು ಬಂಧನ ಮಾಡಲಾಗಿದೆ. ದೂರುದಾರರ ಪತ್ನಿಯ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಆನಂದ್ ಬೆಂಗಳೂರು ಉತ್ತರ ಜಿಲ್ಲೆ ಹಾಗೂ ಮಹಾಲಾಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎಂದು ವರದಿಯಾಗಿದೆ.

