Home » ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಅಬ್ದುಲ್‌ ರೆಹಮಾನ್‌ ಜೈಲಿನಲ್ಲಿ ಹತ್ಯೆ

ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಅಬ್ದುಲ್‌ ರೆಹಮಾನ್‌ ಜೈಲಿನಲ್ಲಿ ಹತ್ಯೆ

0 comments

ಹರಿಯಾಣ: ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ಮಾಡಲು ಸಂಚು ರೂಪಿಸಿ ಜೈಲು ಪಾಲಾಗಿದ್ದ ಅಬ್ದುಲ್‌ ರೆಹಮಾನ್‌ನನ್ನು ಜೈಲಿನಲ್ಲಿ ಬಿಗಿ ಭದ್ರತೆಯ ನಡುವೆಯೂ ಸಹ ಕೈದಿಗಳು ಕೊಲೆ ಮಾಡಿರುವ ಘಟನೆ ಹರಿಯಾಣದ ಫರೀದಾಬಾದ್‌ನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಅಯೋಧ್ಯೆಯ ನಿವಾಸಿ ಅಬ್ದುಲ್‌ ರೆಹಮಾನ್‌ (20) ನನ್ನು ಹರಿಯಾಣದ ಫರೀದಾಬಾದ್‌ ಜಿಲ್ಲೆಯ ಬಲ್ಲಭಗಢದಲ್ಲಿರುವ ನೀಮ್ಕಾ ಜಿಲ್ಲಾ ಜೈಲಿನಲ್ಲಿ ಹತ್ಯೆ ಮಾಡಲಾಗಿದೆ.

2025 ರಲ್ಲಿ ಅಬ್ದುಲ್‌ ರೆಹಮಾನ್‌ನ ಬಂಧನವಾಗಿತ್ತು. ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಈತನ ಬಂಧನವಾಗಿತ್ತು. ಆ ಸಮಯದಲ್ಲಿ ಈತನ ಬಳಿ ಗ್ರೇನೇಡ್‌ ಸೇರಿ ಸ್ಪೋಟಕ ವಸ್ತುಗಳನ್ನು ವಶಪಡಿಸಲಾಗಿತ್ತು.

ಭಾನುವಾರ ರಾತ್ರಿ 10.30 ರ ಸುಮಾರಿಗೆ ಬ್ಯಾರಕ್‌ನಲ್ಲಿ ಜಗಳವಾಗಿತ್ತು. ಆಗ ಸಹ ಕೈದಿ ಅರುಣ್‌ ಚೌಧರಿ ಅಬ್ದುಲ್‌ ರೆಹಮಾನ್‌ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡ ರೆಹಮಾನ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದರು.

ಕೊಲೆ ಆರೋಪಿಯ ಮೇಲೆ ಹಲವು ಪ್ರಕರಣಗಳು ಈ ಮೊದಲೇ ದಾಖಲಾಗಿತ್ತು. ಈಗ ಆತನ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ರೋಹಿತ್‌ ಗೋದಾರ ಗ್ಯಾಂಗ್‌ಗೆ ಸಂಬಂಧಿಸಿದ ಸಹ ಕೈದಿ ಪ್ರಮುಖ ಆರೋಪಿಯಾಗಿದ್ದಾನೆ. ಆರೋಪಿಯನ್ನು ಅರುಣ್‌ ಚೌಧರಿ ಎಂದು ಗುರುತಿಸಲಾಗಿದ್ದು, ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಿಂದ ಜೈಲಿಗೆ ವರ್ಗಾಯಿಸಲಾಗಿತ್ತು.

 

You may also like