ಮಂಗಳೂರು-ಬೆಂಗಳೂರು ಪ್ರಯಾಣದ ಅವಧಿಯನ್ನು ಕೇವಲ 5 ಗಂಟೆಗೆ ಇಳಿಸುವ ಮಹತ್ವಾಕಾಂಕ್ಷೆಯ ʼಶಿರಾಡಿ ಘಾಟ್ ಸುರಂಗ ಮಾರ್ಗʼ ಯೋಜನೆಗೆ ತಾಂತ್ರಿಕ ಅಡೆತಡೆ ಎದುರಾಗಿದೆ. ರಸ್ತೆ ಮತ್ತು ರೈಲು ಮಾರ್ಗ ಎರಡನ್ನೂ ಒಂದೇ ಸುರಂಗದಲ್ಲಿ ನಿರ್ಮಿಸುವ ಬೃಹತ್ ಪ್ರಸ್ತಾವನೆಗೆ ಭೌಗೋಳಿಕ ಏರಿಳಿತಗಳು ಸವಾಲಾಗಿ ಪರಿಣಮಿಸಿದೆ. ತಾಂತ್ರಿಕ ಕಾರಣದಿಂದ ಜಂಟಿ ಯೋಜನೆಯಿಂದ ರೈಲ್ವೆ ಇಲಾಖೆ ಹಿಂದೆ ಸರಿಯುವ ಮುನ್ಸೂಚನೆ ನೀಡಿರುವ ಕುರಿತು ವರದಿಯಾಗಿದೆ.


ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಎರಡೂ ಇಲಾಖೆಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸಲು ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ವ್ಯಾಪ್ತಿಯ ಸುಮಾರು 42 ಕಿಲೋಮೀಟರ್ ಉದ್ದದ ಅಪಾಯಕಾರಿ ಹಾಗೂ ತಿರುವುಗಳಿಂದ ಕೂಡಿದ ಮಾರ್ಗವನ್ನು ಸುರಂಗದ ಮೂಲಕ ನೇರವಾಗಿಸಲು ಇತ್ತೀಚೆಗೆ ಜಂಟಿ ಸರ್ವೆ ನಡೆಸಲಾಗಿತ್ತು. ಆದರೆ, ರಸ್ತೆ ಸಾರಿಗೆ ಮತ್ತು ರೈಲ್ವೆ ಇಲಾಖೆಗಳ ಸುರಕ್ಷತಾ ಮಾನದಂಡ ಹಾಗೂ ಇಳಿಜಾರು (Gradient) ನಿಯಮಗಳಲ್ಲಿ ಭಾರಿ ವ್ಯತ್ಯಾಸವಿರುವುದು ಈ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
