‘ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿನ ಆರಂಭಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ. ಇಂದು ಅದ್ಧೂರಿಯಾಗಿ ನಡೆಯಬೇಕಿದ್ದ ಈ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು (Trial Run) ನೈಋತ್ಯ ರೈಲ್ವೆ ವಲಯವು ಕೊನೆ ಗಳಿಗೆಯಲ್ಲಿ ರದ್ದುಗೊಳಿಸಿದೆ.


ಕಳೆದ ಶನಿವಾರ ರೈಲ್ವೆ ಹಿರಿಯ ಅಧಿಕಾರಿಗಳು ವಂದೇ ಭಾರತ್ ರೈಲು ಸಂಚಾರದ ಕುರಿತು ಅಧಿಕೃತ ಪ್ರಸ್ತಾವನೆ ಸಿದ್ಧಪಡಿಸಿರುವ ಮಾಹಿತಿ ಹೊರಬಿದ್ದಿತ್ತು. ಈ ಪ್ರಾಯೋಗಿಕ ಓಡಾಟದ ಸುದ್ದಿ ಕೇಳಿ ಕರಾವಳಿ ಪ್ರಯಾಣಿಕರು ಅತ್ಯಂತ ಸಂತಸಗೊಂಡಿದ್ದರು. ಆದರೆ, ಈಗ ದಿಢೀರನೆ ಸಂಚಾರ ಸ್ಥಗಿತಗೊಂಡಿರುವುದು ನಿರಾಸೆ ಮೂಡಿಸಿದೆ.
ರೈಲ್ವೆ ಇಲಾಖೆಯು ಈ ಪ್ರಾಯೋಗಿಕ ಸಂಚಾರದ ರದ್ದತಿಗೆ ಯಾವುದೇ ಅಧಿಕೃತ ಕಾರಣವನ್ನು ಬಹಿರಂಗಪಡಿಸಿಲ್ಲವಾದರೂ, ಮೂಲಗಳ ಪ್ರಕಾರ ಪ್ರಮುಖ ಎರಡು ತಾಂತ್ರಿಕ ಕಾರಣಗಳು ಎನ್ನಲಾಗುತ್ತಿದೆ. ಸುರಕ್ಷತಾ ಮೌಲ್ಯಮಾಪನಗಳು ಮುಗಿದ ನಂತರ ಭಾರತೀಯ ರೈಲ್ವೆಯು ಹೊಸ ಪರಿಷ್ಕೃತ ಪ್ರಾಯೋಗಿಕ ದಿನಾಂಕವನ್ನು ಪ್ರಕಟಿಸಲಿದೆ.
AEB (ಅಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್) ಕೊರತೆ: ಪಶ್ಚಿಮ ಘಟ್ಟಗಳ ಕಠಿಣ ಭೂಪ್ರದೇಶ ಹಾಗೂ ಇಳಿಜಾರು ಪ್ರದೇಶಗಳಲ್ಲಿ ರೈಲು ಸುರಕ್ಷಿತವಾಗಿ ಚಲಿಸಲು ‘ಸ್ವಯಂಚಾಲಿತ ತುರ್ತು ಬ್ರೇಕಿಂಗ್ ವ್ಯವಸ್ಥೆ’ (AEB) ಅತ್ಯಂತ ಕಡ್ಡಾಯವಾಗಿದೆ. ಪ್ರಸ್ತುತ ನಿಯೋಜಿಸಲಾಗಿದ್ದ ವಂದೇ ಭಾರತ್ ರೈಲಿನ ರೇಕ್ನಲ್ಲಿ ಈ ಅತ್ಯಾಧುನಿಕ ಬ್ರೇಕಿಂಗ್ ಸಿಸ್ಟಮ್ ಇಲ್ಲದೇ ಇರುವುದೇ ಈ ರದ್ದತಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ರೇಕ್ ಲಭ್ಯತೆ ಮತ್ತು ಕಾರ್ಯಾಚರಣೆಯ ಸವಾಲುಗಳು: ಮತ್ತೊಂದೆಡೆ, ಸೂಕ್ತ ರೈಲ್ವೆ ರೇಕ್ಗಳ (ಬೋಗಿಗಳ ಸೆಟ್) ಕೊರತೆ ಹಾಗೂ ಕಾರ್ಯಾಚರಣೆಯ ಕೆಲವು ತಾಂತ್ರಿಕ ಕಾರಣಗಳು ಈ ನಿರ್ಧಾರದ ಮೇಲೆ ಪ್ರಭಾವ ಬೀರಿವೆ ಎಂದು ಹೇಳಲಾಗುತ್ತಿದೆ.

