Home » ಪರಮೇಶ್ವರ್‌, ರಾಜಣ್ಣಗೆ ಗೌರವ ಡಾಕ್ಟರ್‌ ನೀಡದಿರಲು ತುಮಕೂರು ವಿವಿ ನಿರ್ಧಾರ

ಪರಮೇಶ್ವರ್‌, ರಾಜಣ್ಣಗೆ ಗೌರವ ಡಾಕ್ಟರ್‌ ನೀಡದಿರಲು ತುಮಕೂರು ವಿವಿ ನಿರ್ಧಾರ

0 comments
G Parameshwar

ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವವು ಜೂನ್‌ 3 ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು, ಈ ಬಾರಿ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್‌ ನೀಡದಿರಲು ವಿವಿಯ ಪರಿಶೀಲನಾ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಡಾ.ಜಿ.ಪರಮೇಶ್ವರ್‌ ಹಾಗೂ ಕೆ.ಎನ್‌.ರಾಜಣ್ಣಗೆ ಗೌರವ ಡಾಕ್ಟರೇಟ್‌ ನೀಡದಿರಲು ನಿರ್ಧಾರ ಮಾಡಿರುವ ಕುರಿತು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ತುಮಕೂರು ವಿಶ್ವವಿದ್ಯಾಲಯಕ್ಕೆ ಡಾ. ಜಿ. ಪರಮೇಶ್ವರ್ ಹಾಗೂ ಕೆ. ಎನ್. ರಾಜಣ್ಣ ಅವರ ಕೊಡುಗೆ ತುಂಬಾನೇ ಇದೆ. ಹೀಗಾಗಿ ಇಬ್ಬರಿಗೂ ಗೌರವ ಡಾಕ್ಟರೇಟ್ ನೀಡಬೇಕೆಂಬ ಆಶಯ ನಮಗಿತ್ತು. ಈ ನಿಟ್ಟಿನಲ್ಲಿ ನಾವು ಮೊನ್ನೆ ಇಬ್ಬರ ಹೆಸರುಗಳನ್ನು ಸೇರಿಸಿದ್ದೆವು. ಆದರೆ, ಪರಿಶೀಲನಾ ಸಮಿತಿಯು ಬೇರೆ ಬೇರೆ ರಾಜ್ಯಗಳಲ್ಲಿ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡುವ ನಿಯಮಗಳೇನು ಹಾಗೂ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಯಾವ್ಯಾವ ರಾಜಕಾರಣಿಗಳು ಇದನ್ನು ಸ್ವೀಕರಿಸಿದ್ದಾರೆ ಅಥವಾ ನಿರಾಕರಿಸಿದ್ದಾರೆ ಎಂಬುದರ ಕುರಿತು ಚರ್ಚಿಸಲಾಗಿದೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸತೀಶ್‌ ಜಾರಕಿಹೊಳಿ ಅವರು ತಮಗೆ ಬಂದ ಗೌರವ ಡಾಕ್ಟರೇಟನ್ನು ತಿರಸ್ಕರಿಸಿದ್ದರು. ಸಿದ್ದರಾಮಯ್ಯಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಲು ನಿರ್ಧಾರ ಮಾಡಿದಾಗ, ಅವರೇ ಖುದ್ದಾಗಿ ಈ ರೀತಿ ಕರೆದು ಕೊಡಬಾರದು ಎಂದು ಹೇಳಿದ್ದರು. ಇವೆಲ್ಲದರ ಕಾರಣದಿಂದ ಇನ್ಮುಂದೆ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್‌ ನೀಡಬಾರದು ಎಂದು ಅಂತಿಮವಾಗಿ ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಟಿ. ಆರ್. ರೇವಣ್ಣ, ಕನ್ನಡದ ಕವಿ, ವಚನಕಾರ ಹಾಗೂ ಚಿಂತಕ ದ್ವಾರನಕುಂಟೆ ಪಾತಣ್ಣ, ಮತ್ತು ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ವೃತ್ತಿನಿರತ ವಕೀಲ ಎನ್. ಆರ್. ಪ್ರದೀಪ್ ಅವರಿಗೆ ಈ ಸಾಲಿನ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ.

banner

You may also like