ಕರ್ನಾಟಕ ಕರಾವಳಿ ಭಾಗಕ್ಕೆ ಬೆಂಗಳೂರಿನಿಂದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇತ್ತೀಚೆಗೆ ಅನುಮೋದನೆ ನೀಡಿದ ನಂತರ ಇದೀಗ ಜೂನ್ 3 ರಿಂದ ಪ್ರಾಯೋಗಿ ಸಂಚಾರ ಪ್ರಾರಂಭಿಸಲಿದೆ.


ದಕ್ಷಿಣ ಕರ್ನಾಟಕದ ಭಾಗದಿಂದ ಕರಾವಳಿ ಕರ್ನಾಟಕದ ಭಾಗಕ್ಕೆ ವೇಗದ ರೈಲು ಸಾರಿಗೆ ದೊರಕಿದಂತಾಗಲಿದೆ. ಈ ಮೂಲಕ ಪ್ರಯಾಣಿಕರಿಗೆ, ವ್ಯಾಪಾರ, ವಾಣಿಜ್ಯಕ್ಕೆ ಪೂರಕವಾಗುವ ಜೊತೆಗೆ ಕರಾವಳಿಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಾಗಲಿದೆ.
ಜೂನ್ 3 ರಂದು ಒಟ್ಟು ಎಂಟು ಬೋಗಿಗಳ ರೈಲು ಬೆಳಗ್ಗೆ ಆರು ಗಂಟೆಗೆ ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಹೊರಡಲಿದೆ. ಒಟ್ಟು 8 ಗಂಟೆ 40 ನಿಮಿಷಗಳು ಕ್ರಮಿಸಿ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ತಾತ್ಕಾಲಿಕ ವೇಳಾಪಟ್ಟಿಯಲ್ಲಿ ತಿಳಿಸಿದ್ದಾರೆ.
ಈ ಸಮಯದಲ್ಲಿ ರೈಲಿನ ವೇಗ, ವೇಗ ನಿಯಂತ್ರಣ, ರೈಲಿನ ಸಾಮರ್ಥ್ಯ, ಸುರಂಗ ಮತ್ತು ಘಾಟಿ ಮಾರ್ಗದಲ್ಲಿ ರೈಲಿನ ಕಾರ್ಯಕ್ಷಮತೆ, ಸಿಗ್ನಲಿಂಗ್ ಸೇರಿ ಅನೇಕ ತಪಾಸಣೆಗಳು ನಡೆಯಲಿದೆ. ವಂದೇಭಾರತ್ ಸುಮಾರು 100 ಕಿಲೋ ವೇಗದಲ್ಲಿ ಸಾಗಲಿದೆ. ಘಾಟಿ ಪ್ರದೇಶದಲ್ಲಿ ರೈಲಿನ ವೇಗ ತಗ್ಗಲಿದೆ. ಶೀಘ್ರವೇ ರೈಲಿನ ವಾಣಿಜ್ಯ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಒಟ್ಟು 12 ವಂದೇ ಭಾರತ್ ರೈಲುಗಳು ಸೇವೆಯಲ್ಲಿದೆ. ಕರಾವಳಿಗೆ ವಂದೇ ಭಾರತ್ ರೈಲು ಬಿಡಲು ಬೇಡಿಕೆ ಹೆಚ್ಚಿತ್ತು. ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ ಅವರು ಆಗಾಗ ಘೋಷಣೆ ಕೂಡಾ ಮಾಡಿದ್ದರೂ ಯಾವುದೂ ಅಧಿಕೃತವಾಗಿರಲಿಲ್ಲ. ಇದೀಗ ಕನಸು ನನಸಾಗುವ ಕಾಲ ಬಂದಿದೆ.
ವಂದೇ ಭಾರತ್ ರೈಲು ಬೆಂಗಳೂರಿನಿಂದ ಹೊರಟು ನೇರ ಹಾಸನವನ್ನು ಬೆಳಗ್ಗೆ 9 ಗಂಟೆಗೆ ತಲುಪುತ್ತದೆ. 10 ನಿಮಿಷ ಬಳಿಕ ಅಲ್ಲಿಂದ ಹೊರಟು 9.55 ಗಂಟೆಗೆ ಸಕಲೇಶಪುರ ಮುಟ್ಟಲಿದೆ. ಮಧ್ಯಾಹ್ನ 12.30ಕ್ಕೆ ಸುಬ್ರಹ್ಮಣ್ಯ ರಸ್ತೆ, 2ಗಂಟೆಗೆ ಪಡೀಲ್ ನಂತರ 2.40ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪುತ್ತದೆ. ನಾಲ್ಕು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಮರಳಿ ಅದೇ ದಿಕ್ಕಿನಲ್ಲಿ ರೈಲು ಮಂಗಳೂರಿನಿಂದ 2.45ಕ್ಕೆ ಹೊರಡುತ್ತದೆ. ಪಡೀಲ್ (3.10ಗಂಟೆ), ಸುಬ್ರಹ್ಮಣ್ಯ ರಸ್ತೆ (3.50ಗಂಟೆ), ಸಕಲೇಶಪುರ (4.30ಕ್ಕೆ), ಹಾಸನ (7.30ಕ್ಕೆ) ಮೂಲಕ ಬೆಂಗಳೂರಿಗೆ ರಾತ್ರಿ 11 ಗಂಟೆಗೆ ಬಂದು ಸೇರುತ್ತದೆ.

