ರಾಜಸ್ಥಾನದ ಅಜ್ಮೀರ್ನಲ್ಲಿ ಕಾರೊಂದು ಇತ್ತೀಚೆಗೆ ಬೆಂಕಿಗೆ ಆಹುತಿಯಾಗಿತ್ತು. ಈ ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಆದರೆ ಆ ಸಾವು ಸಹಜ ಸಾವಲ್ಲ ಕೊಲೆ ಎನ್ನುವುದು ಇದೀಗ ತಿಳಿದು ಬಂದಿದೆ. ನಾಲ್ವರನ್ನು ಹತ್ಯೆ ಮಾಡಿ, ಅಪಘಾತವೆಂದು ಬಿಂಬಿಸಲು ಶವಗಳಿದ್ದ ಕಾರಿಗೆ ಬೆಂಕಿ ಹಚ್ಚಲಾಗಿದೆ. ಇದೊಂದು ಕೌಟುಂಬಿಕ ಕಲಹ ಎನ್ನಲಾಗಿದೆ. ಈ ಇಡೀ ಹತ್ಯೆಯ ಮಾಸ್ಟರ್ಮೈಂಡ್ ಬೇರಾರೂ ಅಲ್ಲ ಮೃತರ ಮನೆಯಲ್ಲಿ ಕಣ್ಣೀರಿಡುತ್ತಾ ಬೊಬ್ಬೆ ಹಾಕಿ, ಮೂರ್ಛೆ ಹೋದ ಮೊದಲ ಪತ್ನಿ.


ಅಜ್ಮೀರ್ ನಗರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಶ್ರೀರಾಂಪುರ ಗ್ರಾಮದ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ಸ್ಕಾರ್ಪಿಯೋ ಎಸ್ಯುವಿ ಪತ್ತೆಯಾಗಿತ್ತು. ಒಟ್ಟು ನಾಲ್ಕು ಸುಟ್ಟ ಶವಗಳು ಸಿಕ್ಕಿದ್ದವು. ರಾಮ್ಸಿಂಗ್ ಚೌಧರಿ (ಮಾಜಿ ಸರಪಂಚ್), ಪೂಸಿ ದೇವಿ (ರಾಮ್ ಸಿಂಗ್ ತಾಯಿ), ಸೂರ್ಯಜ್ಞಾನ ದೇವಿ (ರಾಮ್ ಸಿಂಗ್ ಎರಡನೇ ಪತ್ನಿ), ಮಹಿಮಾ ಚೌಧರಿ (ಚಿಕ್ಕಮ್ಮನ ಮಗಳು).
ಪೊಲೀಸರು ಮೊದಲು ಇದೊಂದು ರಸ್ತೆ ಅಪಘಾತ ಎಂದು ಶಕಿಸಿದ್ದರು. ಆದರೆ ವಿಧಿವಿಜ್ಞಾನ ತಜ್ಞರು ಮತ್ತು ಪೊಲೀಸ್ ತಂಡ ಸ್ಥಳ ಪರಿಶೀಲನೆ ಮಾಡಿದಾಗ ದೇಹದ ಮೇಲಿದ್ದ ಗಾಯಗಳು ಇವು ಕೊಲೆ ಎನ್ನುವುದನ್ನು ಖಚಿತಪಡಿಸಿದವು. ಕೊಲೆಗಾರರು ಮೊದಲಿಗೆ ಮನೆಯಲ್ಲೇ ನಾಲ್ವರನ್ನು ಹತ್ಯೆ ಮಾಡಿ, ನಂತರ ಸಾಕ್ಷ್ಯ ನಾಶ ಮಾಡಲು ಶವಗಳನ್ನು ಸ್ಕಾರ್ಪಿಯೋ ಕಾರಿಗೆ ತುಂಬಿಸಿ ಹೆದ್ದಾರಿಗೆ ತಂದು ಬೆಂಕಿ ಹಚ್ಚಿದ್ದರು.
ರಾಮ್ಸಿಂಗ್ ಮನೆಗೆ ಪೊಲೀಸರು ಹೋದಾಗ, ಅವರ ಮೊದಲ ಪತ್ನಿ ಸುನೀತಾ ಗ್ರಾಮದ ಮಹಿಳೆಯರ ನಡುವೆ ಕುಳಿತು ಜೋರಾಗಿ ಅಳುತ್ತಾ, ಎದೆ ಎದೆ ಹೊಡೆದುಕೊಳ್ಳುತ್ತಾ ದುಃಖದಲ್ಲಿರುವಂತೆ ನಟಿಸುತ್ತಿದ್ದಳು. ಅಜ್ಮೀರ್ ಎಸ್ಪಿ ಹರ್ಷವರ್ಧನ್ ಅಗರ್ವಾಲ್ ತನಿಖೆ ಮಾಡಿದಾಗ ಅವರ ತಂಡಕ್ಕೆ ಕೌಟುಂಬಿಕ ಹಿನ್ನೆಲೆಯ ಕುರಿತು ತಿಳಿದು ಬಂದಿದೆ. ರಾಮ್ಸಿಂಗ್ ಇಬ್ಬರು ಪತ್ನಿಯರ ಜೊತೆ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆಸ್ತಿ ಮತ್ತು ಕೌಟುಂಬಿಕ ವಿವಾದವಿತ್ತು, ಬುಧವಾರ ತಡರಾತ್ರಿ ಮನೆಯಲ್ಲಿ ಭೀಕರ ಜಗಳ ಆಗಿದೆ. ಈ ಸಂದರ್ಭದಲ್ಲಿ ಮೊದಲ ಪತ್ನಿ ಸುನೀತಾ, ಆಕೆಯ ಮಗಳು ಸರಿತಾ ಮತ್ತು ಅಪ್ರಾಪ್ತ ಮಗ ಸೇರಿ ಹರಿತವಾದ ಆಯುಧಗಳಿಂದ ನಾಲ್ವರನ್ನು ಭೀಕರವಾಗಿ ಕತ್ತರಿಸಿ ಕೊಂದಿದ್ದಾರೆ.
ಗ್ರಾಮಸ್ಥರು ನೀಡಿದ ಸುಳಿವು ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಪೊಲೀಸರು ಆರೋಪಿ ಸುನೀತಾ ಹಾಗೂ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿದಿದೆ.

