ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಕಾಂತಾರ ದೈವವನ್ನು ಅಣಕಿಸಿದ ವಿಚಾರವಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆ ಬಳಿಕ ಕೇಸ್ ರದ್ದು ಕೋರಿ ರಣವೀರ್ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಕೋರ್ಟ್ ಒಂದು ತಿಂಗಳೊಳಗೆ ಮೈಸೂರಿನ ಚಾಮುಂಡಿ ಬೆಟ್ಟ ದೇವಸ್ಥಾನಕ್ಕೆ ಭೇಟಿ ನೀಡಲು ನಿರ್ದೇಶಿಸಿತ್ತು. ಇದೀಗ ಅವರು ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಮಂಡಿಯೂರಿ ಬೇಷರತ್ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.


ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದಿಢೀರ್ ಭೇಟಿ ನೀಡಿದ ರಣವೀರ್ ಸಿಂಗ್, ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ತದನಂತರ, ದೈವ ನಿಂದನೆಯ ಮಹಾಪರಾಧಕ್ಕಾಗಿ ದೇವಸ್ಥಾನದ ಆವರಣದಲ್ಲಿ ತಾಯಿಯ ಸನ್ನಿಧಿಯಲ್ಲೇ ಮಂಡಿಯೂರಿ ಕುಳಿತು ಬೇಷರತ್ ಕ್ಷಮೆಯಾಚಿಸಿದರು.
ಅಲ್ಲದೆ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರದಿಂದ ಹಠಾತ್ ಹೊರನಡೆದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ವಿರುದ್ಧ ಸಿನಿಮಾ ನೌಕರರ ಒಕ್ಕೂಟ (FWICE) ಅಸಹಕಾರದ ಮೂಲಕ ಬ್ಯಾನ್ ಮಾಡಿದೆ. ಈ ಒಂದು ಭಯದಿಂದಲೂ ಕೂಡ ರಣವೀರ್ ಸಿಂಗ್ ಅವರು ದಿಢೀರ್ ಎಂದು ಅ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಯಾಕೆಂದರೆ ಅಮಿತಾಬ್ ಬಚ್ಚನ್ ಮತ್ತು ಶಾರುಖ್ ಖಾನ್ ಬಳಿಕ ‘ಡಾನ್’ ಪಟ್ಟ ರಣವೀರ್ ಸಿಂಗ್ ಪಾಲಾಗಿತ್ತು. ಫರ್ಹಾನ್ ಅಖ್ತರ್ ಅವರ ಎಕ್ಸೆಲ್ ಎಂಟರ್ಟೈನ್ಮೆಂಟ್ ಈ ಚಿತ್ರಕ್ಕಾಗಿ ಕೋಟ್ಯಂತರ ರೂಪಾಯಿ ಸುರಿದು ಭರ್ಜರಿ ಸೆಟ್ ಹಾಕಿತ್ತು. ಸ್ಕ್ರಿಪ್ಟ್ನಿಂದ ಹಿಡಿದು ಲೊಕೇಶನ್ ವರೆಗೆ ಎಲ್ಲವೂ ಫೈನಲ್ ಆಗಿತ್ತು. ಆದರೆ, ಶೂಟಿಂಗ್ ಆರಂಭವಾಗಲು ಕೆಲವೇ ದಿನಗಳಿರುವಾಗ ರಣವೀರ್ ಸಿಂಗ್ ದಿಢೀರ್ ಆಗಿ ಸಿನಿಮಾದಿಂದ ಹೊರಬಂದಿದ್ದಾರೆ! ಯಾವುದೇ ಮುನ್ಸೂಚನೆ ಇಲ್ಲದೆ ರಣವೀರ್ ನೀಡಿದ ಈ ಶಾಕ್ನಿಂದ ನಿರ್ಮಾಣ ಸಂಸ್ಥೆಗೆ ಭಾರೀ ಆರ್ಥಿಕ ಹೊಡೆತ ಬಿದ್ದಿದೆ. ಪ್ರಿ-ಪ್ರೊಡಕ್ಷನ್ ಹಂತದಲ್ಲೇ ಖರ್ಚಾದ ಕೋಟಿ ಕೋಟಿ ಹಣ ಈಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ನಟನ ಈ ಬೇಜವಾಬ್ದಾರಿ ನಡವಳಿಕೆಯಿಂದ ಸಿನಿಮಾ ನೌಕರರ ಒಕ್ಕೂಟ (FWICE) ಕೆಂಡಾಮಂಡಲವಾಗಿದೆ. ಒಕ್ಕೂಟದ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, “ನಟರು ಹೀಗೆ ಏಕಾಏಕಿ ಶೂಟಿಂಗ್ ಸಮಯದಲ್ಲಿ ಕೈಕೊಟ್ಟರೆ ಇಡೀ ಉದ್ಯಮವೇ ನಾಶವಾಗುತ್ತದೆ” ಎಂದು ಗುಡುಗಿದ್ದಾರೆ. ಇದರ ಬೆನ್ನಲ್ಲೇ, FWICE ನ ಯಾವುದೇ ಸದಸ್ಯರು ರಣವೀರ್ ಸಿಂಗ್ ಸಿನಿಮಾಗಳಲ್ಲಿ ಕೆಲಸ ಮಾಡಬಾರದು ಎಂಬ ಕಠಿಣ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ. ಅಂದರೆ, ಲೈಟ್ಮ್ಯಾನ್ನಿಂದ ಹಿಡಿದು ತಾಂತ್ರಿಕ ವರ್ಗದವರೆಗೆ ಯಾರೂ ಸಹಕರಿಸದಿದ್ದರೆ ರಣವೀರ್ ಸಿನಿಮಾ ಮಾಡುವುದು ಅಸಾಧ್ಯ. ಇದನ್ನೇ ಚಿತ್ರರಂಗದ ಪರೋಕ್ಷ ಬ್ಯಾನ್ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಈಗ ರಣವೀರ್ ಕೆರಿಯರ್ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆ, “ಅಂದು ದೈವಕ್ಕೆ ಅವಮಾನ ಮಾಡಿದ್ದಕ್ಕೆ ಈಗ ನಿನಗೆ ದೈವವೇ ಶಿಕ್ಷೆ ನೀಡುತ್ತಿದೆ. ಕಾಂತಾರ ದೈವದ ಶಾಪ ತಟ್ಟಿದೆ” ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ಗಳ ಸುರಿಮಳೆಯಾಗುತ್ತಿದೆ. ದೈವದ ಶಕ್ತಿಯನ್ನು ಹಗುರವಾಗಿ ಕಂಡರೆ ಅದರ ಪರಿಣಾಮ ಹೀಗೆ ಇರುತ್ತದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

