ತನ್ನ ಲವರ್ ಗೋಸ್ಕರ ಯುವತಿಯೊಬ್ಬಳು ತಾನು ಕೆಲಸ ಮಾಡುತ್ತಿದ್ದ ಆಭರಣ ಮಳಿಗೆಯಿಂದಲೇ 1.66 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದು, ಇದೀಗ ಈ ಮಹಿಳಾ ಉದ್ಯೋಗಿ ಹಾಗೂ ಆಕೆಯ ಸಹಚರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬಂಧಿತರನ್ನು ನ್ಯೂ ನರೋಡಾ ನಿವಾಸಿ ಹರ್ಷಿದಾ ರಾಜೇಂದ್ರಕುಮಾರ್ ಶೆಟ್ಟಿ ಮತ್ತು ವಸ್ತ್ರಲ್ ನಿವಾಸಿ ಮಯೂರ್ ಅಶೋಕ್ಭಾಯ್ ಮಾಲಿ ಎಂದು ಗುರುತಿಸಲಾಗಿದೆ. ವಿಚ್ಛೇದಿತೆಯಾಗಿದ್ದ ಹರ್ಷಿದಾ, ವಿವಾಹಿತನಾಗಿದ್ದ ತನ್ನ ಪ್ರೇಮಿ ಮಯೂರ್ ಮಾಲಿ ಜೊತೆ ಹೊಸ ಜೀವನ ಆರಂಭಿಸಲು ಹರ್ಷಿದಾ ಈ ಒಂದು ಘನಕಾರ್ಯ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ನಿಕೋಲ್ ಪ್ರದೇಶದ ಗ್ರಾವಿಟಿ ಶಾಪಿಂಗ್ ಮಾಲ್ನಲ್ಲಿರುವ ದರ್ಶನ್ ಶಾ ಅವರಿಗೆ ಸೇರಿದ ‘ಅಭೂಷಣ್ ಜ್ಯುವೆಲರ್ಸ್’ ಮಳಿಗೆಯಲ್ಲಿ ಹರ್ಷಿದಾ ಶೆಟ್ಟಿ ಕಳೆದ 11 ತಿಂಗಳಿನಿಂದ ಸೇಲ್ಸ್ವುಮನ್ ಆಗಿ ಕೆಲಸ ಮಾಡುತ್ತಿದ್ದಳು. ಮೇ 11 ರಂದು ಮಧ್ಯಾಹ್ನ ಮಳಿಗೆಯ ಮಾಲೀಕರು ಊಟಕ್ಕೆ ತೆರಳಿದ್ದ ಸಂದರ್ಭ ಹರ್ಷಿದಾ, ಅಲ್ಲಿದ್ದ ಚಿನ್ನದ ಒಡವೆಗಳನ್ನು ತನ್ನ ಯೂನಿಫಾರ್ಮ್ ಬ್ಲೇಜರ್ ಮತ್ತು ಬ್ಯಾಗ್ನಲ್ಲಿ ಬಚ್ಚಿಟ್ಟುಕೊಂಡು ತದನಂತರ ಸಹೋದ್ಯೋಗಿಗಳಿಗೆ ‘ಎಮರ್ಜೆನ್ಸಿ ಇರುವ ಕಾರಣ ಓನರ್ ನನಗೆ ರಜೆ ನೀಡಿದ್ದಾರೆ’ ಎಂದು ಸುಳ್ಳು ಹೇಳಿ ನಂಬಿಸಿ ಮಳಿಗೆಯಿಂದ ಹೊರನಡೆದಿದ್ದಾಳೆ.
ಕಳ್ಳತನದ ಬಳಿಕ ಇಬ್ಬರೂ ಮೋಟಾರ್ ಸೈಕಲ್ನಲ್ಲಿ ಉದಯಪುರ ಮತ್ತು ಜೈಪುರ ಮಾರ್ಗವಾಗಿ ದೆಹಲಿ ತಲುಪಿದ್ದರು. ಆದರೆ, ದೆಹಲಿಯ ಹೋಟೆಲ್ ಒಂದರಲ್ಲಿ ಹರ್ಷಿದಾ ಸ್ನಾನಕ್ಕೆ ತೆರಳಿದ್ದಾಗ, ಆಕೆಯ ಸಹಚರ ಮಯೂರ್ ಬಹುತೇಕ ಎಲ್ಲಾ ಒಡವೆಗಳೊಂದಿಗೆ ಆಕೆಗೆ ವಂಚಿಸಿ ಪರಾರಿಯಾಗಿದ್ದನು. ಅಲ್ಲದೆ ಆಕೆಯ ಪರ್ಸ್ನಲ್ಲಿ ಕೇವಲ 18 ಲಕ್ಷ ರೂ. ಮೌಲ್ಯದ ಒಡವೆಗಳನ್ನು ಮಾತ್ರ ಆತ ಬಿಟ್ಟು ಹೋಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ನಿಕೋಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ತಕ್ಷಣ ತನಿಖೆ ಆರಂಭಿಸಿದ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ಅಧಿಕಾರಿಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದರು. ವಿವಿಧ ನಗರಗಳ ಸುಮಾರು 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ ತನಿಖಾ ತಂಡ ಮತ್ತು ಮೊಬೈಲ್ ಲೊಕೇಶನ್ ಆಧಾರದ ಮೇಲೆ ಮೊದಲು ಹರ್ಷಿದಾಳನ್ನು ಬಂಧಿಸಿತು. ತದನಂತರ ತಲೆಮರೆಸಿಕೊಂಡಿದ್ದ ಮಯೂರ್ ಮಾಲಿಯನ್ನೂ ಯಶಸ್ವಿಯಾಗಿ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳಿಂದ ಪೊಲೀಸರು ಸದ್ಯಕ್ಕೆ ಒಟ್ಟು 22.54 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

